ಪಟ್ಟು ಬಿಡದ ಮಮತಾ, ಎನ್ಡಿಎಯಿಂದ ತೃಣಮೂಲ ಹೊರಕ್ಕೆ
ನವದೆಹಲಿ : ಇತ್ತೀಚೆಗೆ ಸಂಭವಿಸಿದ ರಾಜಕೀಯ ಕೋಲಾಹಲದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದಿಂದ ಹೊರ ಬರಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಮತ್ತೊಂದು ನಿರೀಕ್ಷಿತ ಬೆಳವಣಿಗೆಯಲ್ಲಿ ಸಮತಾ ಪಕ್ಷದ ಅಧ್ಯಕ್ಷೆ ಜಯಾ ಜೇಟ್ಲಿ , ಪಕ್ಷದ ಅಧ್ಯಕ್ಷ ಪದಕ್ಕೆ ರಾಜೀನಾಮೆ ನೀಡಿದ್ದಾರೆ.
ತೃಣಮೂಲ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಎನ್ಡಿಎಯಿಂದ ಹೊರ ಬರುವ ವಿಷಯವನ್ನು ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಗುರುವಾರ ಪ್ರಕಟಿಸಿದರು. ತೆಹಲ್ಕಾ ಡಾಟ್ ಕಾಂ ಬಯಲು ಮಾಡಿದ ರಕ್ಷಣಾ ಅವ್ಯವಹಾರಗಳ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಮಮತಾ, ತಮ್ಮ ಬೇಡಿಕೆಯನ್ನು ಪ್ರಧಾನಿ ವಾಜಪೇಯಿ ತಿರಸ್ಕರಿಸಿದ ಕಾರಣ ಒಕ್ಕೂಟದಿಂದ ಹೊರಬಂದಿದ್ದಾರೆ.
ನಮ್ಮ ಪಕ್ಷ ಭ್ರಷ್ಟಾಚಾರವನ್ನು ಬೆಂಬಲಿಸಲು ಇಷ್ಟ ಪಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಮಮತಾ, ಫರ್ನಾಂಡಿಸ್ ಅವರನ್ನು ಕೈ ಬಿಡದಿರುವ ವಾಜಪೇಯಿ ಅವರ ನಿರ್ಧಾರ ದುರಾದೃಷ್ಟಕರ ಎಂದರು. ಕೇಂದ್ರ ಸಂಪುಟದಲ್ಲಿ ರೈಲ್ವೆ ಖಾತೆ ಹೊಂದಿರುವ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿಶ್ಚಯಿಸಿದ್ದಾರೆ. ಕಾಂಗ್ರೆಸ್ನೊಂದಿಗೆ ತೃಣಮೂಲ ಕಾಂಗ್ರೆಸ್ ಕೈ ಜೋಡಿಸುವ ಯಾವುದೇ ಸಾಧ್ಯತೆಗಳನ್ನು ಮಮತಾ ನಿರಾಕರಿಸಿದ್ದಾರೆ.
ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಜಾ ಸತ್ತಾತ್ಮಕ ಒಕ್ಕೂಟದಿಂದ ಹೊರ ಬರುತ್ತಿರುವ ಎರಡನೇ ಪಕ್ಷ ತೃಣಮೂಲ ಕಾಂಗ್ರೆಸ್ಸಾಗಿದೆ. ಇತ್ತೀಚೆಗಷ್ಟೇ ಪ್ರಜಾ ಸತ್ತಾತ್ಮಕ ಒಕ್ಕೂಟದಿಂದ ಪಿಎಂಕೆ ಪಕ್ಷ ಯಾವುದೇ ಕಾರಣ ನೀಡದೆ ಹೊರಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಜೇಟ್ಲಿ ರಾಜೀನಾಮೆ : ತೆಹಲ್ಕಾ ಡಾಟ್ ಕಾಂ ಬಯಲು ಮಾಡಿರುವ ವಂಚನೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಸಮತಾ ಪಕ್ಷದ ಅಧ್ಯಕ್ಷೆ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ ಜೇಟ್ಲಿ , ಪ್ರಸಕ್ತ ಪಕ್ಷದ ಉಪಾಧ್ಯಕ್ಷರಾಗಿರುವ ವಿ. ಕೃಷ್ಣರಾವ್ ಸಮತಾ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು ಎಂದರು.
(ಇನ್ಫೋ ವಾರ್ತೆ)