ಶೇಕ್ಸ್ಪಿಯರ್ನ ಮ್ಯಾಕ್ಬೆತ್ ಕನ್ನಡದಮಾರನಾಯಕನಾಗಿ ರಂಗಕ್ಕೆ
ಬೆಂಗಳೂರು : ಶೇಕ್ಸ್ಪಿಯರ್ನ ಮ್ಯಾಕ್ಬೆತ್ ನಾಟಕದ ಕನ್ನಡ ರೂಪಾಂತರ ಮಾರನಾಯಕನನ್ನು ಗುರುವಾರ ರಂಗಕ್ಕೆ ಬರಲಿದ್ದಾನೆ. ನಟಿಸುತ್ತಿರುವುದು 30 ಮಂದಿ ಜೈಲುವಾಸಿಗಳು ಅನ್ನುವುದು ನಾಟಕದ ವಿಶೇಷ.
ಈ ವಿಷಯವನ್ನು ಮುಖ್ಯ ಪೊಲೀಸ್ ನಿರೀಕ್ಷಕ(ಜೈಲು ವಿಭಾಗ) ರೇವಣ್ಣ ಸಿದ್ಧಯ್ಯ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಜೈಲಿನ ಕುರಿತ ಇತಿಹಾಸವನ್ನು ಬಿಂಬಿಸುವ ‘ಜೈಲಿನ ನೆನಪುಗಳು’ ಎಂಬ ಎರಡು ದಿನದ ಕಾರ್ಯಕ್ರಮವನ್ನು ಎನ್ಜಿಓ ಗಳ ಸಹಯೋಗದೊಂದಿಗೆ ರಾಜ್ಯ ಸರಕಾರ ಆಯೋಜಿಸಿರುವುದಾಗಿ ಅವರು ಹೇಳಿದರು.
ಎರಡು ದಿನಗಳ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ತಯಾರಿಗಳನ್ನು ಕೈದಿಗಳೇ ನಡೆಸಿದ್ದಾರೆ. ಕಳೆದ 48 ದಿನಗಳ ಅವಧಿಯಲ್ಲಿ ಮಾರನಾಯಕ ನಾಟಕದ ಅಭ್ಯಾಸ ಆರಂಭವಾಗಿದೆ. ಇತ್ತೀಚೆಗಷ್ಟೆ ಕಾಸರಗೋಡಿನ ನಾಟಕ ಭಾರತಿಯವರ ಪ್ರದರ್ಶನದಿಂದ ಮಾರನಾಯಕ ನಾಟಕ ಕಲಾಸಕ್ತರ ಗಮನ ಸೆಳೆದಿದೆ. ಜೈಲಿನಿಂದ ಬಿಡುಗಡೆಯಾಗಿರುವ ಐದು ಮಂದಿ ಮಾಜಿ ಜೈಲು ವಾಸಿಗಳು ಕೂಡ ನಾಟಕದಲ್ಲಿ ಭಾಗವಹಿಸುವರು ಎಂದು ರೇವಣಸಿದ್ಧಯ್ಯ ಹೇಳಿದರು.
ಗುರುವಾರ ಸಂಜೆ 5.30 ಕ್ಕೆ ಸೆಂಟ್ರಲ್ ಜೈಲಿನ ಆವರಣದಲ್ಲಿ ನಡೆಯುವ ನಾಟಕಕ್ಕೆ ಸಾರ್ವಜನಿಕರಿಗೂ ಪ್ರವೇಶವಿದೆ. ಮಧ್ಯಾಹ್ನ 3.30 ರ ನಂತರ ಸೆಂಟ್ರಲ್ ಜೈಲಿನ ಕಚೇರಿಯಿಂದ ಪ್ರವೇಶ ಪತ್ರಗಳನ್ನು ಪಡೆಯಬಹುದು. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ - 080- 2261131.
ಜೈಲು ಇತಿಹಾಸದ ವಸ್ತು ಪ್ರದರ್ಶನ : ಸೆಂಟ್ರಲ್ ಜೈಲಿನ ಇತಿಹಾಸವನ್ನು ಬಿಂಬಿಸುವ ಎರಡು ದಿನಗಳ ವಸ್ತು ಪ್ರದರ್ಶನ ಕೂಡ ಗುರುವಾರದಿಂದ ಪ್ರಾರಂಭವಾಗುವುದು. ಸೆಂಟ್ರಲ್ ಜೈಲಿನ ಒಳಾವರಣದಲ್ಲಿ ನಡೆಯುವ ಪ್ರದರ್ಶನವನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ವಹಿಸುವರು.
ನಿಜಾಮರ ಕಾಲದ ಪದಕಗಳು, ವಾದ್ಯಗಳು, ಕತ್ತಿ ಸೇರಿದಂತೆ ವಿವಿಧ ಆಯುಧಗಳು, ಬ್ರಿಟೀಷರ ಕಾಲದ ವಸ್ತುಗಳು, 1947 ರಲ್ಲಿ ಖೈದಿಗಳನ್ನುದ್ದೇಶಿಸಿ ಮಹಾತ್ಮ ಗಾಂಧಿ ಮಾಡಿದ ಭಾಷಣವನ್ನೊಳಗೊಂಡ ಗ್ರಾಮಾಫೋನ್, ಸ್ವಾತಂತ್ರ್ಯ ಚಳವಳಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಗಲ್ಲಿಗೇರಿಸಿದ ಕೆಲವರ ವಿವರಗಳು ವಸ್ತು ಪ್ರದರ್ಶನದ ಮುಖ್ಯ ಆಕರ್ಷಣೆ.
(ಯುಎನ್ಐ)