ನೀರಾ ಇಳಿಸಲು ತಕ್ಷಣವೇ ಅನುಮತಿ ನೀಡಲಾಗದು -ಖರ್ಗೆ
ಬೆಂಗಳೂರು : ಸೇಂದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶ ಸರಕಾರಕ್ಕಿರುವುದರಿಂದ ರಾಜ್ಯದಲ್ಲಿ ಮತ್ತೆ ಸೇಂದಿ ವ್ಯಾಪಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಂಗಳವಾರ, ಪ್ರಶ್ನೋತ್ತರ ಅವಧಿಯಲ್ಲಿ ಅವರು ಎಡಿಎಂಕೆ ಶಾಸಕ ಭಕ್ತವತ್ಸಲ ಅವರ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡುತ್ತಿದ್ದರು. ನುಸಿ ರೋಗದಿಂದ ನಷ್ಟ ಅನುಭವಿಸುತ್ತಿರುವ ತೆಂಗು ಬೆಳೆಗಾರರಿಗೆ ನೀರಾ ಇಳಿಸಲು ಅನುಮತಿ ನೀಡಬೇಕು ಎಂಬ ಬೇಡಿಕೆಯ ಬಗ್ಗೆ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಖರ್ಗೆ ಹೇಳಿದರು.
ನೀರಾ ಹೆಸರಿನಲ್ಲಿ ಸಮಾಜಘಾತುಕ ಶಕ್ತಿಗಳು ಲಾಭ ಪಡೆಯಬಹುದಾದ್ದರಿಂದ ತಕ್ಷಣವೇ ನೀರಾ ಇಳಿಸಲು ಅನುಮತಿ ನೀಡುವುದು ಸಾಧ್ಯವಿಲ್ಲ . ದಕ್ಷಿಣ ಕನ್ನಡ, ಉಡುಪಿ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮೂರ್ತೆದಾರರ ಸಹಕಾರ ಸಂಘಗಳ ಮೂಲಕ ಸೇಂದಿ ಮಾರಾಟಕ್ಕೆ ಅನುಮತಿ ಇದೆ. ಆದರೆ ರಾಜ್ಯದ ಇತರೆಡೆಗಳಲ್ಲಿ ಸೇಂದಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಸಚಿವರು ವಿವರಿಸಿದರು.
ತೆಂಗು ಬೆಳೆಗಾರರನ್ನು ಸಂಕಷ್ಟದಿಂದ ಪಾರುಮಾಡಲು ಒಂದೆರಡು ವರ್ಷಗಳ ಕಾಲವಾದರೂ ನೀರಾ ಇಳಿಸಲು ಅನುಮತಿ ನೀಡಬೇಕು ಎಂದು ಜನತಾ ದಳ ಶಾಸಕ ಬೈರೇಗೌಡರು ಸರಕಾರವನ್ನು ಆಗ್ರಹಿಸಿದಾಗ , ನೀರಾ ಹೆಸರಿನಲ್ಲಿ ಸೇಂದಿ ಮಾರಲಾಗುತ್ತಿದೆ. ಗಾಂಜಾ, ಆಫೀಮುಗಳನ್ನೂ ಬೆರೆಸಲಾಗುತ್ತಿದೆ. ಆದ್ದರಿಂದ ನೀರಾ ಇಳಿಸಲು ಅನುಮತಿ ನೀಡುವುದು ಸಲ್ಲ ಎಂದು ಹನುಮೇ ಗೌಡರು ಪ್ರತಿಭಟಿಸಿದರು.
(ಇನ್ಫೋ ವಾರ್ತೆ)