ಸಂದು ಹೋದ ಮಾಯದಂಥಾ ಮಳೆ
ಮಂಗಳವಾರ ಬೆಳಿಗ್ಗೆ ಕಣ್ಣುಜ್ಜಿಕೊಳ್ಳುತ್ತಾ ಹೊಸಿತಿಲಾಚೆ ಬಂದ ಬೆಂಗಳೂರಿಗರನ್ನು ಸ್ವಾಗತಿಸಿದ್ದು ತಣ್ಣನೆ ಗಾಳಿ ಹಾಗೂ ಮಣ್ಣಿನ ಗಮಲು. ರಾತ್ರಿ ಯಾವ ಮಾಯದಲ್ಲೋ ಹನಿದ ಮಳೆ, ಇರುಳು ತಾನು ಸಂದು ಹೋದುದಕ್ಕೆ ಮುಂಜಾನೆಯೂ ಸಾಕ್ಷಿ ಉಳಿಸಿತ್ತು . ಅಂಗಳಕ್ಕೆ ನೀರು ಚಿಮುಕಿಸುವ ಬೆಳಿಗ್ಗೆಯ ಬೇಜಾರು ಮಳೆಯಿಂದಾಗಿ ಬಗೆಹರಿದ ಖುಷಿ , ಗೃಹಿಣಿಯರಿಗೆ.
ದಕ್ಷಿಣ ಕರ್ನಾಟಕದ ಒಳನಾಡಿನ ಕೆಲ ಭಾಗಗಳಲ್ಲಿ ಹನಿ ಉದುರಿದ್ದು ಹೊರತು ಪಡಿಸಿದರೆ, ಯಥಾ ಪ್ರಕಾರ ಒಣಹವೆಯ ಪ್ರಾಬಲ್ಯ ರಾಜ್ಯದಲ್ಲಿ ಮುಂದುವರಿದಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ಒಳಭಾಗಗಳಲ್ಲಿ ಒಣಹವೆ, ಹೆಚ್ಚಿನ ತಾಪಮಾನ ದಾಖಲಾಗಿದೆ.
ಮಂಗಳವಾರದ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಷಿಯಸ್ಸನ್ನು ರಾಯಚೂರು ದಾಖಲಿಸಿದೆ. ಅದೇ ರಾಯಚೂರಿನ ಶಕ್ತಿ ನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿನ ಘಟಕದ ವೈಫಲ್ಯದಿಂದ ರಾಜ್ಯದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆಯಾಟ ನಡೆದಿರುವುದನ್ನು ಇಲ್ಲಿ ನೆನೆಯಬಹುದು. ಇನ್ನು ದಿನದ ಕನಿಷ್ಠ ತಾಪಮಾನ 13.8 ಡಿಗ್ರಿ ಸೆಲ್ಷಿಯಸ್ ಬೆಳಗಾವಿಯಲ್ಲಿ ದಾಖಲಾಗಿದೆ.
ಬುಧವಾರ ಕೂಡ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯುವುದೆಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ದಕ್ಷಿಣ ಕರ್ನಾಟಕದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಂಗಳವಾರದಂಥದ್ದೇ ತುಂತುರು ಹನಿಯ ಮಳೆಯಾಗಬಹುದು. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಸಂಜೆ ಅಥವಾ ರಾತ್ರಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆಯೂ ಇದೆ.