ಗಂಗಾವತಿ ಬಳಿ ಲಾರಿ - ಟೆಂಪೋ ಡಿಕ್ಕಿ 4 ಸಾವು, 11 ಜನರಿಗೆ ಗಾಯ
ರಾಯಚೂರು : ಗಂಗಾವತಿಯಿಂದ ಕೊಪ್ಪಳದ ಕಡೆಗೆ ಹೊರಟಿದ್ದ ಟೆಂಪೊ ಒಂದಕ್ಕೆ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಾವನ್ನಪ್ಪಿದ್ದು, ಇತರ 11 ಮಂದಿ ಗಾಯಗೊಂಡಿದ್ದಾರೆ.
ಲಾರಿ ಹಾಗೂ ಟೆಂಪೋ ನಡುವೆ ಸೋಮವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳು ಪಕ್ಕದ ಹಳ್ಳಕ್ಕೆ ಬಿದ್ದವು. ಹಳ್ಳಕ್ಕೆ ಉರುಳಿದ ಟೆಂಪೋ ಮೇಲೆ ಲಾರಿಯೂ ಮಗುಚಿದ ಕಾರಣ ಹೆಚ್ಚಿನ ಸಾವು - ನೋವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮೃತಪಟ್ಟವರನ್ನು ಮಂಜುನಾಥ (12), ಖಾದರ್ ಸಾಬ್ (18), ಹುಸೇನಪ್ಪ (45) ಹಾಗೂ ವೀರೇಶಪ್ಪ (18) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವೀರೇಶಪ್ಪನನ್ನು ಬಳ್ಳಾರಿಯ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದರು. ಉಳಿದ ಮೂವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾವತಿ ಸಮೀಪದ ಚಿಕ್ಕಿ ಬೆಣಕಲ್ ಸಮೀಪ ಈ ಅಪಘಾತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
(ರಾಯಚೂರು ಪ್ರತಿನಿಧಿಯಿಂದ)