ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳುತ್ತಿರುವ ವಿದ್ಯುತ್ ಪೂರೈಕೆ
ಬೆಂಗಳೂರು : ಕಳೆದ ಎರಡು - ಮೂರು ದಿನಗಳಿಂದ ರಾಜ್ಯದಲ್ಲಿ ಉಂಟಾಗಿದ್ದ ವಿದ್ಯುತ್ ವೈಫಲ್ಯದ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಶನಿವಾರ ರಾಜ್ಯ ವಿದ್ಯುತ್ ನಿಗಮ ತಿಳಿಸಿದೆ. ಕೇಂದ್ರ ವಿದ್ಯುತ್ ಜಾಲದಿಂದ ರಾಜ್ಯಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಪೈಕಿ ಹೈದರಾಬಾದ್ ಹಾಗೂ ತಮಿಳುನಾಡಿನಿಂದ ದೊರಕುತ್ತಿದ್ದ ವಿದ್ಯುತ್ ಮಾರ್ಗದಲ್ಲಿ ಉಂಟಾದ ತೊಂದರೆ ಹಾಗೂ ಕೈಗಾ, ರಾಯಚೂರು ಮತ್ತು ನಾಗಝರಿ ಕೇಂದ್ರಗಳಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ತೊಂದರೆಯಿಂದ ಈ ಸಮಸ್ಯೆ ಉದ್ಭವಿಸಿತ್ತು.
ಹೈದರಾಬಾದಿನ 220 ಕಿಲೋ ವ್ಯಾಟ್ ವಿದ್ಯುತ್ ಕೇಂದ್ರದಲ್ಲಿ ಶುಕ್ರವಾರ ಸಂಜೆ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಗುತ್ತಿ - ಸೋಮನಹಳ್ಳಿ, ಕಡಪ - ಸೋಮನಹಳ್ಳಿ ಮತ್ತು ಸೇಲಂ - ಸೋಮನಹಳ್ಳಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಾಗದೆ ಬೆಂಗಳೂರೂ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳು ಕತ್ತಲಲ್ಲಿ ಇರುವಂತಾಗಿತ್ತು.
ಆಂಧ್ರ ಪ್ರದೇಶದ ಕಡಪ ಹಾಗೂ ತಮಿಳುನಾಡಿನ ಸೇಲಂ ಮಾರ್ಗದಲ್ಲಿ ಕಡಿತವಾಗಿದ್ದ ವಿದ್ಯುತ್ ಜಾಲವನ್ನು ಪುನರ್ ಸ್ಥಾಪಿಸಲಾಗಿದೆ. ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದ ಎರಡು ಘಟಕಗಳು ಹಾಗೂ ನಾಗಝರಿಯ ಒಂದು ಘಟಕ ಈಗ ಕಾರ್ಯಪ್ರವೃತ್ತವಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ನಿಗಮ ತಿಳಿಸಿದೆ. ಕಳೆದ 3 ದಿನದಿಂದ ಉಂಟಾಗಿದ್ದ ಸಮಸ್ಯೆಯಿಂದಾಗಿ ರಾಜ್ಯ 400 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಅನುಭವಿಸಿದ್ದು, ಅನಿಯಮಿತ ವಿದ್ಯುತ್ಕಡಿತ ಜಾರಿಯ ಮೂಲಕ ಆ ಕೊರತೆಯನ್ನು ತುಂಬಿಕೊಳ್ಳಲಾಗಿದೆ ಎಂದೂ ಹೇಳಿದೆ.
ಹಾಲಿ ರಾಯಚೂರು ವಿದ್ಯುತ್ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಕೈಗಾದಲ್ಲಿ ಇನ್ನೂ ಉತ್ಪಾದನೆ ಆರಂಭಗೊಂಡಿಲ್ಲ. ಭಾನುವಾರ ಸಂಜೆಯ ವೇಳೆಗೆ ರಾಜ್ಯದ ವಿದ್ಯುತ್ ಪೂರೈಕೆ ಸಂಪೂರ್ಣ ಸಹಜ ಸ್ಥಿತಿಗೆ ಮರಳುತ್ತದೆ ಎಂದೂ ನಿಗಮದ ಮೂಲಗಳು ತಿಳಿಸಿವೆ.
ಮುಖಪುಟ / ಇವತ್ತು... ಈ ಹೊತ್ತು...