ರಾಜ್ಯಕ್ಕೆ ವಿದ್ಯುತ್ ಕ್ಷಾಮದ ಭೀತಿ, ಮಿತ ಬಳಕೆಗೆ ಮನವಿ
ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮುಂಬರುವ ಸುಡು ಬೇಸಿಗೆಯ ದಿನಗಳಲ್ಲಿ ರಾಜ್ಯವು ವಿದ್ಯುತ್ ಸರಬರಾಜಿನಲ್ಲಿ ಸಂಕಷ್ಟದ ದಿನಗಳನ್ನು ಎದುರಿಸಲೇ ಬೇಕಾಗುತ್ತದೆ. ಈ ವಿಷಯವನ್ನು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಶುಕ್ರವಾರ ವಿಧಾನಸಭೆಯಲ್ಲೇ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 86 ಮಿಲಿಯನ್ ಯುನಿಟ್ಗಳಷ್ಟು ವಿದ್ಯುತ್ ಬಳಸುತ್ತಿದ್ದೆವು. ಈದರೆ, ಈ ವರ್ಷ ವಿದ್ಯುತ್ ಬಳಕೆ 98 ಮಿಲಿಯನ್ ಯುನಿಟ್ ದಾಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಭಾರಿ ಸಂಕಷ್ಟ ಎದುರಿಸಬೇಕಾಗಿ ಬರುತ್ತದೆ ಎಂಬ ಸುಳಿವು ನೀಡಿದರು.
ಹಾಲಿ ಉತ್ಪಾದಿಸಲಾಗುತ್ತಿರುವ ವಿದ್ಯುತ್ಗೂ, ಬಳಕೆಯಾಗುತ್ತಿರುವ ವಿದ್ಯುತ್ಗೂ ತಾಳೆ ಆಗುತ್ತಿಲ್ಲ. ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಸಹಜವಾಗೇ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯುತ್ ಗ್ರಿಡ್ಗಳನ್ನು ಮತ್ತಷ್ಟು ಶಕ್ತಿಯುತ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಒಪ್ಪಂದವೊಂದಕ್ಕೆ ಸಹಿ ಮಾಡಿದೆ ಎಂದರು.
ವಿದ್ಯುತ್ ಪ್ರಸರಣ ಮಂಡಳಿಗಳಿಗೆ ಹಿಡಿದಿರುವ ಗ್ರಹಚಾರ ಬಿಡಿಸಿ, ಅದನ್ನು ಕೈಹಿಡಿದು ಮೇಲೆತ್ತುವ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಾದ್ಯಂತ ಒಮ್ಮತ ಮೂಡಿದೆ ಎಂದ ಅವರು ವಿದ್ಯುತ್ ಕ್ಷಾಮ ತಲೆದೋರದಂತೆ ತಡೆಯಲು ಹಿತ ಮಿತವಾಗಿ ವಿದ್ಯುತ್ ಬಳಸುವಂತೆ ಕರೆ ತಿಳಿಸಿದರು.
ಕಗ್ಗತ್ತಲಲ್ಲಿ ರಾಜ್ಯ : ಕೆ.ಪಿ.ಟಿ.ಸಿ.ಎಲ್. ತತ್ಕ್ಷಣದಿಂದ ಜಾರಿಗೆ ಬರುವಂತೆ ಅನಿಯಮಿತ ಲೋಡ್ಷೆಡ್ಡಿಂಗ್ ಮಾಡುವುದಾಗಿ ತಿಳಿಸಿದೆ. ನಾಗಝರಿ, ಕೈಗಾ ಹಾಗೂ ರಾಯಚೂರು ವಿದ್ಯುತ್ ಘಟಕದಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಯ ಪರಿಣಾಮವಾಗಿ ಕೇಂದ್ರ ವಿದ್ಯುತ್ ಜಾಲದಿಂದ ವಿದ್ಯುತ್ ಸರಬರಾಜು ಆಗುವ ಮೂರು ಮಾರ್ಗಗಳಲ್ಲಿ ಸಂಪರ್ಕ ಕಡಿದು, ಬೆಂಗಳೂರಿನ ಕೆಲವು ಬಡಾವಣೆಗಳೂ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳು ಶುಕ್ರವಾರ ರಾತ್ರಿ ಕಗ್ಗತ್ತಲಲ್ಲಿ ಮುಳುಗಿದ್ದವು.