ಕನ್ನಡದ ಸಮಗ್ರ ಅಭಿವೃದ್ಧಿಗೆ 74 ಲಕ್ಷ ರುಪಾಯಿ ಸಾಕೆ?
ಬೆಂಗಳೂರು : ಕನ್ನಡ ನಾಡಿನಲ್ಲಿಯೇ ಕನ್ನಡವನ್ನು ಹುಡುಕುವ ಸ್ಥಿತಿ ಬಂದಿದೆ ಎಂಬ ದೂರು ಇಂದು ನಿನ್ನೆಯದಲ್ಲ. ಕನ್ನಡದ ಅಭಿವೃದ್ಧಿ ಆಗಲೇ ಬೇಕು. ಆದರೆ ಹೇಗೆ? ಕನ್ನಡದ ಅಭಿವೃದ್ಧಿಗೆ 74 ಲಕ್ಷ ರುಪಾಯಿ ಸಾಕೆ? ಸಾಕೋ ಬೇಕೋ ರಾಜ್ಯ ಸರಕಾರವಂತೂ ಕನ್ನಡದ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ 74 ಲಕ್ಷ ರುಪಾಯಿ ಮೀಸಲಿಟ್ಟಿದೆಯಂತೆ. 74 ಲಕ್ಷ ರುಪಾಯಿ ಮೀಸಲಿಟ್ಟಿರುವ ವಿಷಯವನ್ನು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಬಿ.ಜೆ.ಪಿ.ಯ ಶಂಕರಮೂರ್ತಿ ಅವರಿಗೆ ನೀಡಿದ ಉತ್ತರದಲ್ಲಿ ಸಚಿವರು ಈ ವಿಷಯ ಪ್ರಕಟಿಸಿದರು. ಮೀಸಲಿಟ್ಟಿರುವ 74 ಲಕ್ಷ ರುಪಾಯಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಪಾಲು 44 ಲಕ್ಷವಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.
ಗಡಿ ಪ್ರದೇಶಗಳ ಅಧ್ಯಯನಕ್ಕಾಗಿ ಸರಕಾರ ನೇಮಿಸಿದ್ದ ಸಮಿತಿಯ ಮಧ್ಯಂತರ ವರದಿ ಪರಿಶೀಲಿಸಿದ ಬಳಿಕ ಗಡಿ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.
ದೇವನೂರಿನಲ್ಲಿ ಲಕ್ಷ್ಮೀಶ ಕವಿ ಪ್ರತಿಮೆ : ಕನ್ನಡದ ಪ್ರಾಚೀನ ಕವಿ ಲಕ್ಷ್ಮೀಶನ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದಲ್ಲಿರುವ ದೇವನೂರಿನಲ್ಲಿ ಲಕ್ಷ್ಮೀಶ ಕವಿಯ ಪ್ರತಿಮೆಯನ್ನು ಸ್ಥಾಪಿಸಲು ಹಾಗೂ ಬಯಲು ರಂಗಮಂದಿರವೊಂದನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ ಎಂದೂ ಸಚಿವರು ಹೇಳಿದರು.
ದೇವನೂರಿನ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದಲ್ಲಿರುವ ಕಾವ್ಯ ಮಂಟಪವನ್ನು ದುರಸ್ತಿಗೊಳಿಸಲು ಮತ್ತು ಅಲ್ಲಿ ಲಕ್ಷ್ಮೀಶ ಕವಿಯ ಪ್ರತಿಮೆ ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದ್ದು, 1.55 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.