ಧಾರವಾಡದಲ್ಲಿ ಸಂಭ್ರಮದ ಹೋಳಿ, ಅಂಗಡಿ - ಮುಂಗಟ್ಟಿಗೆ ರಜೆ
ಧಾರವಾಡ : ರಾಜ್ಯಾದ್ಯಂತ ಹೋಳಿಯ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಬಾಲಕರು ಬಣ್ಣ ಬಣ್ಣದ ಹೋಳಿ ಹಾಗೂ ಓಕುಳಿಯನ್ನು ಬಂಧು ಮಿತ್ರರಿಗೆ ಲೇಪಿಸಿ ಆನಂದ ಹಂಚಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಆಕಾಶವಾಣಿಯಲ್ಲಿ ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು..... , ಬಣ್ಣಾ ನನ್ನ ಒಲವಿನ ಬಣ್ಣ.... ಎಂಬಿತ್ಯಾದಿ ಗೀತೆಗಳೂ ಮೊಳಗಿದವು.
ಹೋಳಿಯ ಹುಣ್ಣಿಮೆಯ ದಿನವಾದ ಶುಕ್ರವಾರ ರಾತ್ರಿ ಬೆಂಗಳೂರೂ ಸೇರಿದಂತೆ ರಾಜ್ಯದ ಹಲವು ಊರುಗಳಲ್ಲಿ ಮನ್ಮಥನ ಪ್ರತಿಕೃತಿಗಳನ್ನು ಮಾಡಿ ಕಾಮ ದಹನ ಮಾಡಲಾಯಿತು. ಧಾರವಾಡ ಹಾಗೂ ಹುಬ್ಬಳ್ಳಿ ನಗರದಲ್ಲಿ ಹೋಳಿಯ ಸಂಭ್ರಮ ಸಡಗರ ಎಲ್ಲೆಲ್ಲೂ ಕಂಡು ಬಂತು.
ಧಾರವಾಡದ ಲೈನ್ ಬಜಾರ್ ಬಳಿ ನಡೆದ ಮಡಿಕೆ ಒಡೆವ ಸ್ಪರ್ಧೆ ಆಕರ್ಷಣೆಯ ಕೇಂದ್ರವಾಗಿತ್ತು. ನೂರಾರು ಉತ್ಸಾಹಿ ಯುವಕರು ಮಡಿಕೆ ಒಡೆಯುವ ಸಾಹಸದಲ್ಲಿ ತೊಡಗಿದ್ದರು. ಈ ಸಾಹನವನ್ನು ನೋಡಲು ಸಾವಿರಾರು ಮಂದಿ ನೆರೆದಿದ್ದರು. ಆಬಾಲ ವೃದ್ಧರಾಗಿ ಎಲ್ಲರೂ ಪರಸ್ಪರರಿಗೆ ಬಣ್ಣವನ್ನು ಬಳಿಯುತ್ತಾ ಹೋಳಿಯನ್ನು ಆಚರಿಸಿದರು. ಹೋಳಿಯ ಪ್ರಯುಕ್ತ ಶನಿವಾರ ನಗರದ ಎಲ್ಲ ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದವು.
ಹುಬ್ಬಳ್ಳಿಯಲ್ಲಿ ಕೂಡ ಶಾಂತಿಯುತವಾಗಿ ಹೋಳಿ ಆಚರಿಸಲಾಯಿತು. ರಸ್ತೆಯಲ್ಲಿ ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸುತ್ತಿದ್ದ ಹುಡುಗರ ಗುಂಪು ಸಾಮಾನ್ಯ ದೃಶ್ಯವಾಗಿತ್ತು.
ಮುಖಪುಟ / ಇವತ್ತು... ಈ ಹೊತ್ತು...