ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಮೂಲೆ ಮೂಲೆಗೂ ಹಬ್ಬಲಿದೆ ಹಂಪಿಯ ಭವ್ಯ ಇತಿಹಾಸ

By Staff
|
Google Oneindia Kannada News

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಹಾಗೂ ಕಂಪ್ಯೂಟರ್‌ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಪ್ರವಾಸೋದ್ಯಮ ನಿಗಮದ ಕಾರ್ಯ ಸ್ತುತ್ಯಾರ್ಹ. ಇದು ಸಾಫ್ಟ್‌ವೇರ್‌ ಕ್ಷೇತ್ರದ ದಿಗ್ಗಜರಲ್ಲೊಬ್ಬರಾದ ಇನ್‌ಫೋಸಿಸ್‌ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಅಭಿನಂದನೆಯ ನುಡಿ.

ಸಂದರ್ಭ: ವಿಶ್ವವಿಖ್ಯಾತ ಹಂಪಿಯ ವೈಭವ ಸಾರುವ ಸಿ.ಡಿ (ಕಾಂಪ್ಯಾಕ್ಟ್‌ ಡಿಸ್ಕ್‌) ಬಿಡುಗಡೆ ಸಮಾರಂಭ. ಕೇಂದ್ರ ಪ್ರವಾಸೋದ್ಯಮ ನಿಗಮ ಬೆಂಗಳೂರಿನ ಅಶೋಕ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ಹಂಪೆಯ ಇತಿಹಾಸವನ್ನು ಸೆರೆಹಿಡಿದ ಸಿ.ಡಿ. ಬಿಡುಗಡೆ ಸಮಾರಂಭ ಏರ್ಪಡಿಸಿತ್ತು. ನಾರಾಯಣ ಮೂರ್ತಿ ಅವರು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಅನಂತಕುಮಾರ್‌ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವ ರೋಷನ್‌ಬೇಗ್‌ ಅವರ ಸಮ್ಮುಖದಲ್ಲಿ ಈ ಸಿ.ಡಿ. ಬಿಡುಗಡೆ ಮಾಡಿದರು.

ಐಟಿಗಿಂತ ಶಕ್ತಿಶಾಲಿ ಮಾಧ್ಯಮ ಮತ್ತೊಂದಿಲ್ಲ : ಮಾಹಿತಿ ತಂತ್ರಜ್ಞಾನಕ್ಕಿಂತ ಮಿಗಿಲಾದ ಹಾಗೂ ಶಕ್ತಿಯುತವಾದ ಸಾಧನ ಮತ್ತೊಂದಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿರುವ ಪ್ರವಾಸಿಗನಿಗೆ ಮಾಹಿತಿ ತಂತ್ರಜ್ಞಾನ ಸೂಕ್ತ ಹಾಗೂ ಸಮರ್ಪಕ ಮಾಹಿತಿಯನ್ನು ನೀಡುವ ಭಂಡಾರವಾಗಿದೆ. ಈ ಮಹತ್ವವನ್ನು ಅರಿತು, ಐತಿಹಾಸಿಕ ಹಂಪೆಯ ಇತಿಹಾಸವನ್ನು ಸಚಿತ್ರವಾಗಿ ಬಿಂಬಿಸುವ ಕಾರ್ಯ ಮಾಡಿರುವ ಪ್ರವಾಸೋದ್ಯಮ ಇಲಾಖೆಗೆ ಹಾಗೂ ಸಚಿವ ಅನಂತಕುಮಾರ್‌ರನ್ನು ನಾನು ಅಭಿನಂದಿಸುತ್ತೇನೆ ಎಂದು ನಾರಾಯಣ ಮೂರ್ತಿ ಹೇಳಿದರು.

ನೆರವಿಗೆ ಮನವಿ: ರಾಜ್ಯ ಸರಕಾರ ಸಹ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದೆ. ಹುಡ್ಕೋ ನೆರವಿನಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೂರು ಕೋಟಿ ರುಪಾಯಿಗಳ ನೆರವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಘೋಷಿಸಿದ್ದಾರೆ. ಇದೇ ಮೊತ್ತದ ನೆರವನ್ನು ಕೇಂದ್ರ ಸರಕಾರ ಸಹ ನೀಡಬೇಕು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ರೋಷನ್‌ ಬೇಗ್‌ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ಸಂಪೂರ್ಣ ಆಂಗ್ಲ ಮಯವಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಕೇಂದ್ರ ಸಚಿವ ಅನಂತಕುಮಾರ್‌ ಅವರು, ತಮ್ಮ ಇಲಾಖೆಯ ಸಾಧನೆಗಳನ್ನು ವರ್ಣಿಸುತ್ತಾ ಮತ್ತೆ ಶರಣಾದದ್ದು ಇಂಗ್ಲಿಷ್‌ ಭಾಷೆಗೆ. ಪ್ರತಿವರ್ಷ ಅಮೆರಿಕಕ್ಕೆ 100 ದಶಲಕ್ಷ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ, ಫ್ರಾನ್ಸ್‌ಗೆ 80 ದಶಲಕ್ಷ, ಜರ್ಮನಿಗೆ 16 ಮಿಲಿಯನ್‌ ಪ್ರವಾಸಿಗರು ಬರುತ್ತಾರೆ. ಆದರೆ, ಭಾರತ ಭವ್ಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವದ ಸ್ಥಳಗಳನ್ನು ಹೊಂದಿದ್ದಾಗ್ಯೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೇವಲ 3 ದಶಲಕ್ಷ ಮಾತ್ರ.

ವರ್ಚ್ಯುಯಲ್‌ ರಿಕ್ರಿಯೇಷನ್‌ ಸಿ.ಡಿ : ಈ ನಿಟ್ಟಿನಲ್ಲಿ ಭಾರತದ ಭವ್ಯ ಸ್ಮಾರಕಗಳ ಹಾಗೂ ಪ್ರೇಕ್ಷಣೀಯ ಮತ್ತು ಪ್ರವಾಸಿ ತಾಣಗಳ ಪರಿಪೂರ್ಣ ಮಾಹಿತಿಯನ್ನು ವಿಶ್ವಾದ್ಯಂತ ಪ್ರಸಾರ ಮಾಡುವುದು ನಮ್ಮ ಮುಂದಿರುವ ಉದ್ದೇಶ. ಇದರ ಪ್ರಥಮ ಹಂತವಾಗಿ ಇಂದು ನಾವು ಹಂಪೆಯ ಸಮಗ್ರ ಮಾಹಿತಿಯನ್ನೊಳಗೊಂಡ ಸಿ.ಡಿ.ಯನ್ನು ಹೊರತಂದಿದ್ದೇವೆ ಎಂದರು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌, ಖಜುರಾಹೋ, ಕೋನಾರ್ಕ್‌ನ ಸಿ.ಡಿ.ಗಳನ್ನೂ ಬಿಡುಗಡೆ ಮಾಡಲಾಗುವುದು ಎಂದರು.

ಭಾರತದ ಪ್ರವಾಸೋದ್ಯಮದ ಪರಿಚಯ ಮಾಡಿಸಲು ಒನ್‌ ಟಚ್‌ ಮಾಹಿತಿ ಹಾಗೂ ಸೌಕರ್ಯ ಒದಗಿಸುವುದು ನಮ್ಮ ಇಲಾಖೆಯ ಉದ್ದೇಶವಾಗಿದೆ. ಈಗಾಗಲೇ ದೆಹಲಿಯ ಕೆಂಪುಕೋಟೆಯಲ್ಲಿ ವಿದ್ಯುನ್ಮಾನ ಪ್ರವಾಸಿ ಮಾರ್ಗದರ್ಶಿಯನ್ನು ಅಳವಡಿಸಲಾಗಿದೆ. ಇಲಾಖೆಯ ಎಲ್ಲ ಕಚೇರಿಗಳಿಗೂ ಕಂಪ್ಯೂಟರ್‌ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಅಧಿಕಾರಿಗಳಿಗೂ ಈ ಮೇಲ್‌ ವಿಳಾಸ ಒದಗಿಸಲಾಗಿದೆ. ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X