ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಮೆಕ್ಕೆಜೋಳ ಖರೀದಿಗೆ ಶ್ರೀಲಂಕಾ- ಬಾಂಗ್ಲಾ ಮುಂದು

By Staff
|
Google Oneindia Kannada News

ಬೆಂಗಳೂರು : ರೈತರ ಕಣ್ಣೊರೆಸಲು ತಡಕಾಡುತ್ತಿರುವ ಸರ್ಕಾರಕ್ಕೊಂದು ಆಶಾಕಿರಣ. ಬಾಂಗ್ಲಾದೇಶ ಮತ್ತು ಶ್ರೀಲಂಕಾ 1 ಲಕ್ಷ ಟನ್‌ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದಿವೆ.

ವಿಧಾನ ಪರಿಷತ್ತಿನ ಕಲಾಪದ ಚಕಮಕಿ ಮಧ್ಯೆ ಗದ್ದಲ ಅಡಗಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ಡಿ.ಬಿ.ಇನಾಂದಾರ್‌, ಬಾಂಗ್ಲಾ ಹಾಗೂ ಶ್ರೀಲಂಕಾ ದೇಶಗಳು ಖರೀದಿ ಆರ್ಡರ್‌ಗಳನ್ನು ಸರ್ಕಾರದ ಮುಂದಿಟ್ಟಿವೆ. ಮೆಕ್ಕೆಜೋಳದ ರಫ್ತಿಗೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕೇಂದ್ರ ವಾಣಿಜ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.

ರಾಜ್ಯದಲ್ಲಿ ಬೆಳೆದಿರುವ ಲಕ್ಷಾಂತರ ಟನ್‌ ಮೆಕ್ಕೆಜೋಳ ಖರೀದಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಖರೀದಿಸಿದ ಮಾಲನ್ನು ಸಂಗ್ರಹಿಸಿಡಲು ಗೋದಾಮು ಇಲ್ಲದಿರುವುದು ದೊಡ್ಡ ತಲೆನೋವಾಗಿದೆ. ಮಹಾರಾಷ್ಟ್ರ ಗೋದಾಮುಗಳಲ್ಲಿ ಬೆಳೆಯನ್ನು ಶೇಖರಿಸಿಡುವ ಸಾಧ್ಯತೆಯ ಬಗೆಗೂ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ. ಈಗ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಖರೀದಿಗೆ ಮುಂದೆ ಬಂದಿರುವುದು ಮರುಭೂಮಿಯಲ್ಲಿ ಓಯಸಿಸ್‌ ಕಂಡಂತಾಗಿದೆ ಎಂದು ಹೇಳಿದರು.

ದಗಾ ದಲ್ಲಾಳಿಗಳಿಗೆ ತಕ್ಕ ಶಾಸ್ತಿ : ಇದೇ ವಿಷಯವಾಗಿ ಮಾತನಾಡಿದ ನೀರಾವರಿ ಸಚಿವ ಎಚ್‌.ಕೆ.ಪಾಟೀಲ್‌, ರೈತರ ಪ್ರಾಣ ಹಿಂಡುವ ದಲ್ಲಾಳಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲೂ ಸರ್ಕಾರ ಹಿಂಜರಿಯುವುದಿಲ್ಲ. ತನ್ನ ಬೆಳೆಯನ್ನು ಖರೀದಿಸುವರೆಂದರೆ ಸಾಕು, ರೈತ ಪುಟಿದೇಳುವ ಇವತ್ತಿನ ಸಂದಭದಲ್ಲಿ ಪರಿಸ್ಥಿತಿಯ ಲಾಭ ಪಡೆದು, ಸ್ವಾರ್ಥ ಮೆರೆಯುವ ಮಧ್ಯಸ್ಥರಿಗೆ ಕಿಂಚಿತ್ತೂ ಮಾನವೀಯತೆಯಿಲ್ಲ ಎಂದು ವಿಷಾದಿಸಿದರು.

ರೈತನ ಸಮಸ್ಯೆಗೆ ಮಾರ್ಚ್‌ 12ರಂದು ಸರ್ಕಾರದ ಉತ್ತರ : ಒಣ ಕೊಬ್ಬರಿ ಖರೀದಿಸಿರುವ ರಾಷ್ಟ್ರೀಯ ಕೃಷಿ ಒಕ್ಕೂಟದಿಂದ ರಾಜ್ಯಕ್ಕೆ 3.5 ಕೋಟಿ ರುಪಾಯಿ ಬಾಕಿ ಬರಬೇಕು. ಆದರೆ ಸರ್ಕಾರ ಆ ಹಣಕ್ಕೆ ಕಾಯದೆ, ಕೊಬ್ಬರಿ ರೈತರಿಗೆ 2.5 ಕೋಟಿ ರುಪಾಯಿ ಕೊಟ್ಟಿದೆ. ಬೆಂಬಲ ಬೆಲೆ ಕುಸಿದಿರುವ ಬಗ್ಗೆ ಉಭಯ ಸದನಗಳಲ್ಲೂ ನಡೆದಿರುವ ಬಿಸಿ ಚರ್ಚೆಗೆ ಮಾರ್ಚ್‌ 12ರಂದು ಸರ್ಕಾರ ವಿವರಣಾತ್ಮಕ ಉತ್ತರ ನೀಡಲಿದೆ ಎಂದು ಪಾಟೀಲ್‌ ಹೇಳಿದರು.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X