ಹಲೋ ಕೃಷ್ಣ , ಕರಳುಬೇನೆಗೆ ಜನ ಖಂಡಿತ ಸಾಯ್ತಿದಾರೆ
ಬೆಂಗಳೂರು : ಬುಧವಾರ ವಿಧಾನಸಭೆಯಲ್ಲಿ ಕರಳುಬೇನೆ ನಿಯಂತ್ರಣಕ್ಕೆ ಸರ್ಕಾರ ಏನು ಮಾಡುತ್ತಿದೆ ಅನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಈ ರೋಗದಿಂದ ಈವರೆಗೆ ಯಾರೂ ಸತ್ತಿಲ್ಲ ಅಂದಿದ್ದರು. ನೀರಿಗೆ ಇನ್ನೊಂದು ಹಿಡಿ ಕ್ಲೋರಿನ್ ಸುರಿದು, ತೆರೆದ ಜಾಗೆಯಲ್ಲಿ ಹಣ್ಣು ಮಾರಾಟ ಮಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದರು. ಆದರೆ ದಿನದಿನಕ್ಕೆ ಒಬ್ಬೊಬ್ಬರನ್ನು ಕಟ್ಟಿ ಹಾಕುತ್ತಿರುವ ಕರಳುಬೇನೆಯ ಪಾಶ ಕಿತ್ತೊಗೆಯುವುದು ಕಷ್ಟವಾಗುತ್ತಿದೆ. ಗುರುವಾರ ಮುಕುಂದ (24) ಎಂಬ ಯುವಕ ಈ ಪಾಶಕ್ಕೆ ಸಿಲುಕಿದ್ದಾನೆ.
ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಈವರೆಗೆ ಕಿಂಚಿತ್ತೂ ಕಡಿತ ಉಂಟಾಗಿಲ್ಲ. ಗುರುವಾರ ಆಸ್ಪತ್ರೆಗೆ ಒಟ್ಟು 15 ಮಂದಿ ದಾಖಲಾಗಿದ್ದು, ಅವರಲ್ಲಿ 7 ಮಂದಿ ಮಹಿಳೆಯರು, ಐವರು ಪುರುಷರು ಹಾಗೂ ಮೂವರು ಮಕ್ಕಳು. 300ಕ್ಕೂ ಹೆಚ್ಚು ಮಂದಿ ಈಗ ಆಸ್ಪತ್ರೆಯ ಅತಿಥಿಗಳು. ಅವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗಳ ವೈದ್ಯರ ದೃಢೀಕರಣದಿಂದಲೇ ಈ ರೋಗದಿಂದ ಸತ್ತವರ ಸಂಖ್ಯೆ 3ಕ್ಕೇರಿರುವುದು ಸ್ಪಷ್ಟವಾಗಿದೆ. ಈಗಲೂ ನಮ್ಮ ಮುಖ್ಯಮಂತ್ರಿಗಳು ಕರಳುಬೇನೆಗೆ ಯಾರೂ ಸತ್ತಿಲ್ಲ ಎಂಬ ವಾದವನ್ನೇ ಮುಂದುವರೆಸುತ್ತಾರೋ ಅಥವಾ ರೋಗ ತಡೆಗಟ್ಟಲು ತಕ್ಕ ಕ್ರಮ ಕೈಗೊಳ್ಳುತ್ತಾರೋ ನೋಡಬೇಕು.
(ಇನ್ಫೋ ವಾರ್ತೆ)
ವಾರ್ತಾ
ಸಂಚ-ಯ
ಮುಖಪುಟ
/
ಇವತ್ತು...
ಈ
ಹೊತ್ತು...