Get Updates
Get notified of breaking news, exclusive insights, and must-see stories!

ಸಂಶೋಧಕ ಡಾ. ಚಿದಾನಂದ ಮೂರ್ತಿ ಅವರಿಗೆ‘ಮಾಸ್ತಿ ಪ್ರಶಸ್ತಿ’

ಬೆಂಗಳೂರು : ಕನ್ನಡ ನಾಡಿನ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರನ್ನು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಗೌರವವಾದ ಮಾಸ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹೆಸರಾಂತ ಸಾಹಿತಿ ಮಾವಿನಕೆರೆ ರಂಗನಾಥ್‌ ಅವರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿದ್ದ ಸಮಿತಿ ಚಿ.ಮೂ. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿಯು ಕನ್ನಡದ ಆಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಫಲಕ, ಪ್ರಶಸ್ತಿ ಪತ್ರ ಹಾಗೂ 25 ಸಾವಿರ ರುಪಾಯಿ ನಗದನ್ನು ಒಳಗೊಂಡಿದೆ. ಜೂನ್‌ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರೊ. ಎಂ.ಎಚ್‌. ಕೃಷ್ಣಯ್ಯ, ಡಾ. ಎನ್‌.ಎಸ್‌. ತಾರಾನಾಥ್‌, ಜಿ.ಎನ್‌. ರಂಗನಾಥರಾವ್‌, ಡಾ. ಕೃಷ್ಣಮೂರ್ತಿ ಹನೂರು, ಪ್ರೊ. ಗೀತಾ ರಾಮಾನುಜಮ್‌ ಮತ್ತು ಉಷಾ ಕೇಸರಿ ಅವರನ್ನೊಳಗೊಂಡ ಸಮಿತಿ ರಂಗನಾಥ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭಾಷೆ, ವ್ಯಾಕರಣ, ಛಂದಸ್ಸು, ಸಾಂಸ್ಕೃತಿಕ, ಜಾನಪದ, ಸಂಶೋಧನೆ, ಶಾಸನಶಾಸ್ತ್ರಗಳ ವಿಭಾಗಗಳಲ್ಲಿ ಚಿದಾನಂದ ಮೂರ್ತಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿತು.

ಚಿ.ಮೂ. ಪ್ರತಿಕ್ರಿಯೆ: ಇದು ನನ್ನ ಅರ್ಹತೆಗೂ ಮೀರಿದ ಪುರಸ್ಕಾರ. ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಗೌರವ ದೊರೆತಿರುವುದು ನನಗೆ ಅತೀವ ಆನಂದ ತಂದಿದೆ ಎಂದು ಡಾ. ಚಿದಾನಂದ ಮೂರ್ತಿ ಇಂಡಿಯಾ ಇನ್‌ಫೋ ಡಾಟ್‌ ಕಾಂ ಗೆ ತಿಳಿಸಿದ್ದಾರೆ.

ನನಗಿಂತ ಹಿರಿಯರು ಹಾಗೂ ಅರ್ಹರಿಗೆ ಈ ಪ್ರಶಸ್ತಿ ನೀಡಲಾಗಿದೆ. ಜಿ.ಎಸ್‌. ಶಿವರುದ್ರಪ್ಪ, ಹಾ.ಮಾ. ನಾಯಕ್‌ ಮೊದಲಾದ ಗಣ್ಯರಿಗೆ ಈ ಪ್ರಶಸ್ತಿ ದೊರೆತಿದ್ದು, ಅಂತಹ ಮಹಾನ್‌ ಸಾಹಿತಿಗಳ ಸಾಲಿನಲ್ಲಿ ನನ್ನ ಹೆಸರು ಸೇರುತ್ತಿದೆ ಇದು ನನಗೆ ದೊರೆತ ಅತಿ ದೊಡ್ಡ ಗೌರವ ಎಂದು ಹರ್ಷಚಿತ್ತರಾಗಿದ್ದ ಚಿ.ಮೂ. ಪ್ರತಿಕ್ರಿಯಿಸಿದ್ದಾರೆ.

ಚಿ.ಮೂ. ಕಿರು ಪರಿಚಯ : ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹಿರೇಕೋಗಲೂರಿನಲ್ಲಿ 1931ರ ಮೇ 10ರಂದು ಜನಿಸಿದ ಚಿ.ಮೂ. ಮೈಸೂರು ವಿ.ವಿ.ಯಲ್ಲಿ ಬಿ.ಎ. ಆನರ್ಸ್‌ ಹಾಗೂ ಎಂ.ಎ. ಪದವಿ ಪಡೆದರು. ಚಿಕಾಗೋ ವಿಶ್ವ ವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್‌ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾದ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಸಂಚಾಲಕರಾದ ಚಿ.ಮೂ. ಮೊದಲಿನಿಂದಲೂ ಕನ್ನಡ ನೆಲದಲ್ಲಿ ಕನ್ನಡದ ಉಳಿವಿಗೆ ಅವಿರತ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಗೋಕಾಕ್‌ ಚಳವಳಿಯ ಸಂದರ್ಭದಲ್ಲಿ ಚಿ.ಮೂ. ಅವರ ಸೇವೆ ಸ್ತುತ್ಯಾರ್ಹ.

ಶೂನ್ಯ ಸಂಪಾದನೆಯನ್ನು ಕುರಿತ ಸಂಶೋಧನಾ ತರಂಗ, ಪೂರ್ಣ ಸೂರ್ಯ ಗ್ರಹಣ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನೂ ಪಡೆದಿರುವ ಚಿದಾನಂದ ಮೂರ್ತಿ ಅವರಿಗೆ 1999-2000 ಸಾಲಿನ ಸೇಡಿಯಾಪು ಸಂಶೋಧನಾ ಪ್ರತಿಷ್ಠಾನದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಚಿದಾನಂದ ಮೂರ್ತಿ ಅವರು, ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ 4ನೇ ಅಂತಾರಾಷ್ಟ್ರೀಯ ಐತಿಹಾಸಿಕ ಭಾಷಾ ವಿಜ್ಞಾನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಹೆಗ್ಗಳಿಕೆಗೂ ಪಾತ್ರರು. 83-84ರಲ್ಲಿ ತಿರುವನಂತಪುರದ ದ್ರಾವಿಡ ಭಾಷಾ ವಿಜ್ಞಾನ ಸಮ್ಮೇಳನ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಗ್ರಾಮೀಣ, ವಾಗಾರ್ಥ, ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು, ಬಸವಣ್ಣನವರು, ಕನ್ನಡ ಪಾಠಗಳು ಇವರ ಪ್ರಮುಖ ಕೃತಿಗಳು. ವೀರಶೈವ ಧರ್ಮ - ಭಾರತೀಯ ಸಂಸ್ಕೃತಿ ( ಹಿಂದೂ - ಲಿಂಗಾಯತ) ಹಾಗೂ ಪಾಂಡಿತ್ಯ ರಸ ( ಸಂಶೋಧನಾ ಜೀವನದ ಅನುಭವಗಳ ಕುರಿತ ಕಿರುಹೊತ್ತಗೆ) ಇತ್ತೀಚಿನ ಕೃತಿಗಳು. 1984ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ 1998ರಲ್ಲಿ ಹೊಸತು ಹೊಸತು ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ ಚಿ.ಮೂ. ಅವರಿಗೆ ಸಂದಿವೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+