ತಿರುಗದ ಫ್ಯಾನು, ಅಲುಗಾಡದ ಎಲೆ, ಸೆಕೆಯೋ ಸೆಕೆ !
ಬೆಂಗಳೂರು : ರಾಯಚೂರು ಥರ್ಮಲ್ ವಿದ್ಯುತ್ ಕೇಂದ್ರದ 220 ಕೆ.ವಿ. ಸಾಮರ್ಥ್ಯದ ಎರಡು ಮಾರ್ಗಗಳಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದ ಬೆಂಗಳೂರಿನ ಕೆಲವು ಬಡಾವಣೆಗಳೂ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳು ಬುಧವಾರ ರಾತ್ರಿ ಕಗ್ಗತ್ತಲಲ್ಲಿ ಮುಳುಗಿದ್ದವು. ವಿದ್ಯುತ್ ವೈಫಲ್ಯದಿಂದಾಗಿ ಮನೆಯಲ್ಲಿ ಫ್ಯಾನ್ಗಳು ಗಿರಿಗಿರಿ ತಿರುಗಲೇ ಇಲ್ಲ.
ಮನೆಯಾಳಗೆ ಇದ್ದವರಿಗೆ ಕಾದ ಕಾವಲಿಯ ಮೇಲೆ ಕುಳಿತ ಅನುಭವ ಆಗಿರಲಿಕ್ಕೂ ಸಾಕು. ಮನೆಯಾಳಗೆ ದಗೆ ಎಂದು ತಾರಸಿಯ ಮೇಲೆ ಬಂದರೂ ಗಾಳಿಯ ಸುಳಿವಿರಲಿಲ್ಲ. ಮರ - ಗಿಡಗಳ ಎಲೆಗಳು ಅಲುಗಾಡಲೇ ಇಲ್ಲ. ರಾಜ್ಯದಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿದೆ. ಇಷ್ಟು ದಿನ ಚಳಿ ಚಳಿ ಎನ್ನುತ್ತಿದ್ದವರು ಈಗ ಮಳೆಯಾದೀತೇ ಎಂದು ಮುಗಿಲು ನೋಡುತ್ತಿದ್ದಾರೆ. ಬೇಸಿಗೆಯಲ್ಲಿ ಎಲ್ಲಿಯ ಮಳೆ. ಕೇವಲ ಸೆಕೆಯೋ ಸೆಕೆ.
ಅಂದಹಾಗೆ ರಾಜ್ಯದಲ್ಲಿ ಮುಂದುವರಿದಿದೆ ಒಣಹವೆ. ರಾಜ್ಯದ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಒಳನಾಡಿನ ಕೆಲವೆಡೆ ತಾಪಮಾನ ಸಾಮಾನ್ಯ ಮಟ್ಟದಲ್ಲಿದ್ದರೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ತಾಪಮಾನದಲ್ಲಿ ಏರಿಕೆ ಆಗಿದೆ.
ರಾಜ್ಯದ ಗರಿಷ್ಠ ತಾಪಮಾನ 38ಡಿಗ್ರಿ ಸೆಲ್ಸಿಯಸ್ ರಾಯಚೂರಿನಲ್ಲೂ, ಅತಿ ಕಡಿಮೆ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್ ಬೆಳಗಾವಿ ವಿಮಾನ ನಿಲ್ದಾಣದಲ್ಲೂ ದಾಖಲಾಗಿದೆ. ಮುನ್ಸೂಚನೆಯಂತೆ ರಾಜ್ಯಾದ್ಯಂತ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಖ್ಯವಾಗಿ ಶುಭ್ರ ಆಕಾಶ ಇದ್ದು, ದಿನದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದಿದೆ ಹವಾಮಾನ ವೀಕ್ಷಣಾಲಯದ ವರದಿ.