ಮಲ್ಪೆ - ಉಡುಪಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಕೆ
ಉಡುಪಿ : ಸೋಮವಾರ ಸಂಜೆ ಎರಡು ಕೋಮಿನ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಉದ್ವಿಘ್ನ ಪರಿಸ್ಥಿತಿಯನ್ನು ನಿಭಾಯಿಸಲು ಮಲ್ಪೆ ಹಾಗೂ ಉಡುಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕಿಯಾ ಸಂಹಿತೆಯ ಸೆಕ್ಷನ್ 144ರ ಅಡಿಯಲ್ಲಿ ಜಾರಿ ಮಾಡಲಾಗಿರುವ ನಿಷೇಧಾಜ್ಞೆಯನ್ನು ಶುಕ್ರವಾರ ಸಂಜೆ 7 ಗಂಟೆಯವರೆಗೂ ವಿಸ್ತರಿಸಲಾಗಿದೆ.
ಪರಿಸ್ಥಿತಿಯನ್ನು ತಿಳಿಗೊಳಿಸಿ, ನಗರ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಗುರುವಾರ ಜಿಲ್ಲಾಧಿಕಾರಿ ಗೌರವಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆಯನ್ನೂ ನಡೆಸಲಾಯಿತು. ಎಲ್ಲ ಕೋಮಿನ, ಧರ್ಮದ ಮುಖಂಡರು, ರಾಜಕೀಯ ಧುರೀಣರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರದೇಶದಲ್ಲಿ ಶಾಂತಿ ಕಾಪಾಡುವ ಭರವಸೆ ಈ ಸಭೆಯಲ್ಲಿ ವ್ಯಕ್ತವಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಅವರು ಮಲ್ಪೆಯಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸುತ್ತಿದ್ದಾರೆ. ಗುರುವಾರ ಯಾವುದೇ ಹೊಸ ಗಲಭೆಗಳು ನಡೆದಿಲ್ಲ. ಪರಿಸ್ಥಿತಿ ಶಾಂತವಾಗಿದೆ. ಹೆಚ್ಚುವರಿ ಪೊಲೀಸ್ ತುಕಡಿಗಳನ್ನೂ ನಿಯೋಜಿಸಲಾಗಿದೆ.
ಅಪಘಾತ : ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಒಂದು ಉರುಳಿಬಿದ್ದು, ಚಾಲಕ ಮೃತಪಟ್ಟಿದ್ದಾನೆ. ಟ್ಯಾಂಕರ್ ಮಂಗಳೂರಿನಿಂದ - ಬೆಂಗಳೂರಿನ ಕಡೆಗೆ ಡಿಸೆಲ್ ಕೊಂಡೊಯ್ಯುತ್ತಿತ್ತು. ಸಾವನ್ನಪ್ಪಿರುವ ಚಾಲಕನನ್ನು ಎಸ್. ಕುಮಾರ್ (25) ಎಂದು ಗುರುತಿಸಲಾಗಿದೆ.
(ಮಂಗಳೂರು ಪ್ರತಿನಿಧಿಯಿಂದ)