58 ವರ್ಷಕ್ಕೆ ಮುನ್ನ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ಇಲ್ಲ : ಕೃಷ್ಣ
ಬೆಂಗಳೂರು : ಸರಕಾರಿ ಸೇವೆಗೆ ಸೇರಿದ ದಿನದಿಂದ 33 ವರ್ಷ ಅಥವಾ ನೌಕರನಿಗೆ 58 ವರ್ಷ ಈ ಎರಡರಲ್ಲಿ ಯಾವುದು ಮೊದಲು ಪೂರ್ಣವಾಗುತ್ತದೋ ಆಗ ನೌಕರರನ್ನು ನಿವೃತ್ತಿಗೊಳಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರಕಾರದ ಹೊಸ ಚಿಂತನೆಯಿಂದಾಗಿ 33 ವರ್ಷ ಸೇವೆ ಪೂರೈಸಿದ ನೌಕರರು 58 ವರ್ಷತುಂಬುವ ಮುನ್ನವೇ ನಿವೃತ್ತರಾಗುತ್ತಾರೆ ಎಂಬ ಗುಲ್ಲು ಕಳೆದ ಕೆಲವು ದಿನಗಳಿಂದ ಇತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಸ್ಪಷ್ಟೀಕರಣ ನೀಡಿದರು.
ಸರಕಾರಿ ನೌಕರರಲ್ಲಿ ಈ ಸಂಬಂಧ ಉಂಟಾಗಿದ್ದ ಆತಂಕದ ಬಗ್ಗೆ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಗಮನ ಸೆಳೆದಾಗ. ಇಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ. ಇಲ್ಲ ಸಲ್ಲದ ವಿಷಯಗಳಿಗೆ ತಲೆ ಕೆಡೆಸಿಕೊಳ್ಳುವುದನ್ನು ಬಿಟ್ಟು. ನಿಮ್ಮ ಪಾಡಿಗೆ ನೀವು ಶ್ರದ್ಧೆಯಿಂದ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಹೇಳಿದರು.
ಇಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿರುವುದರಿಂದ ಸರಕಾರಿ ನೌಕರರು ಆತಂಕ ತೊರೆದು ನಿಶ್ಚಿಂತೆಯಿಂದ ಇರುವಂತೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಪ್ಪೇಗೌಡ ತಿಳಿಸಿದ್ದಾರೆ.