ಗುಲ್ಬರ್ಗಾ ಜಿಲ್ಲೆಯ 190 ಗ್ರಾಮಗಳಿಗೆ ನೀವು ಬಸ್ಸಿನಲ್ಲಿ ಹೋಗುವಂತಿಲ್ಲ
ಬೆಂಗಳೂರು : ರಸ್ತೆಗಳಿಲ್ಲದ ಕಾರಣ, ಜಿಲ್ಲೆಯ 190 ಗ್ರಾಮಗಳು ಬಸ್ ಸೌಲಭ್ಯ ಹೊಂದಿಲ್ಲ ಎಂದು ಸಾರಿಗೆ ಸಚಿವ ಸಿ.ಆರ್. ಸಗೀರ್ ಅಹ್ಮದ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಡಾ.ಎ.ಎಚ್. ಶಿವಯೋಗಿ ಸ್ವಾಮಿ ಅವರ ಪ್ರಶ್ನೆಗೆ ಬುಧವಾರ ಉತ್ತರಿಸುತ್ತಿದ್ದ ಸಚಿವರು, ಗುಲ್ಬರ್ಗಾ ಜಿಲ್ಲೆಯ 150 ಮಾರ್ಗಗಳು ರಾಷ್ಟ್ರೀಕರಣಗೊಂಡಿವೆ. ಆದರೆ, 190 ಹಳ್ಳಿಗಳಿಗೆ ಸಮರ್ಪಕ ರಸ್ತೆಗಳು ಇಲ್ಲದ ಕಾರಣ ಇನ್ನೂ ಬಸ್ ಸೌಲಭ್ಯ ಕಲ್ಪಿಸಲಾಗಿಲ್ಲ ಎಂದರು.
ಸಚಿವರು ನೀಡಿರುವ ಮಾಹಿತಿಯ ಪ್ರಕಾರ - ಗುಲ್ಬರ್ಗಾ ತಾಲ್ಲೂಕಿನ 17, ಜೇವರ್ಗಿಯ 24, ಆಳಂದದ 4, ಅಫಜಲ್ಪುರದ 7, ಚಿಂಚೋಳಿಯ 14, ಯಾದಗಿರಿಯ 31, ಶಹಾಪೂರದ 20, ಸುರಪುರದ 28, ಚಿತ್ತಾಪುರದ 13, ಹಾಗೂ ಸೇಡಂ ತಾಲ್ಲೂಕಿನ 32 ಗ್ರಾಮಗಳು ಈವರೆಗೆ ಬಸ್ ಕಂಡಿಲ್ಲ .
ಕೊನೆಸಿಡಿ : ರಸ್ತೆ ಹಾಗೂ ಬಸ್ಸುಗಳನ್ನು ಆ 190 ಹಳ್ಳಿಗಳ ಮಂದಿ ಕಾಣುವುದ್ಯಾವಾಗ ಅನ್ನುವ ಬಗ್ಗೆ ಸಚಿವರು ಏನನ್ನೂ ಹೇಳಿಲ್ಲ . ದೇಶಕ್ಕೆ ಸ್ವಾತಂತ್ರ್ಯ ಬಂದು ಕೇವಲ 50 ವರ್ಷಗಳು ಮಾತ್ರ ತುಂಬಿರುವುದರಿಂದ ಜನ ಭರವಸೆ ಕಳೆದುಕೊಳ್ಳದಿರಲಿ.
(ಇನ್ಫೋ ವಾರ್ತೆ)