316 ದೇವದಾಸಿಯರಿಗೆ ಸೂರು : ಮಹಿಳೆಯರ ದಿನದ ಸಿಹಿ ಸುದ್ದಿ
ಬೆಂಗಳೂರು : ಗುರುವಾರ (ಮಾ.8) ಅಂತರರಾಷ್ಟ್ರೀಯ ಮಹಿಳಾ ದಿನ. ಆಧುನೀಕ ಪ್ರಪಂಚದಲ್ಲಿ ಪುರುಷನಿಗೆ ಸೆಡ್ಡು ಹೊಡೆದು ನಿಂತಿರುವ ಬೆರಳೆಣಿಕೆಯಷ್ಟು ಮಹಿಳೆಯರ ಸಾಧನೆ, ಇವತ್ತಿಗೂ ಮೌಢ್ಯಗಳ- ಪುರುಷ ಸ್ವಾರ್ಥದ ತೆಕ್ಕೆಗೆ ಸಿಕ್ಕು ನರಳುತ್ತಿರುವ ಎಣಿಸಲಾರದಷ್ಟು ಹೆಂಗಸರ ಮುಂದೆ ಏನೇನೂ ಅಲ್ಲ. ಇಂಥ ದಿನ ಸರ್ಕಾರದಿಂದ ಮಹಿಳೆಯರಿಗೆ, ಅದರಲ್ಲೂ ಶೋಷಿತ ಮಹಿಳೆಯರಿಗೆ ಏನಾದರೂ ಒಂದಿಷ್ಟು ಒಳ್ಳೇದಾಗಿದೆಯೇ ಅನ್ನೋದು ಮುಖ್ಯ. ಹೌದು ಆಗಿದೆ ಎನ್ನುತ್ತಿದೆ ಈ ಸುದ್ದಿ...
ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಸ್ತುತ ವರ್ಷ 316 ದೇವದಾಸಿಯರಿಗೆ ರಾಜ್ಯ ಸರ್ಕಾರ ಪುನರ್ವಸತಿ ಕಲ್ಪಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾ ದಿನವಾದ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಗೆಜ್ಜೆ ಕಟ್ಟಿಕೊಂಡು ದೇವಾಲಯಕ್ಕೆ ನೀವು ಮೀಸಲು ಎಂದು ಸಮಾಜ ಕೊಟ್ಟ ಪಟ್ಟ ಕಟ್ಟಿಕೊಂಡು, ಕಣ್ಣೀರಲ್ಲಿ ಕೈತೊಳೆದಿರುವ ಈ 316 ದೇವದಾಸಿಯರ ಪುನರ್ವಸತಿಗೆ ಸರ್ಕಾರ 54.15 ಲಕ್ಷ ರುಪಾಯಿ ಖರ್ಚು ಮಾಡಿದೆ. ನೊಂದ ಹೃದಯಗಳಿಗೆ ಹೊಸ ಜೀವನ ಕೊಡುವ ಇಂಥಾ ಕೆಲಸಗಳು ಇನ್ನಷ್ಟು ಆಗಬೇಕು. ಈ ನಿಟ್ಟಿನಲ್ಲಿ ಜನರ ಪ್ರಾಮಾಣಿಕ ಯತ್ನ ಮುಖ್ಯ. ಇಂಥಾ ಒಳ್ಳೆ ಕಾರ್ಯಕ್ಕೆ ಸರ್ಕಾರದ ನಿಧಿಯ ಕೊರತೆ ಇಲ್ಲ ಎಂದು ಸಚಿವರು ಹೇಳಿದರು.
ಗುರಮ್ಮ ಸಿದ್ಧಾರೆಡ್ಡಿ ಅವರ ನೇತೃತ್ವದಲ್ಲಿ 6 ಮಂದಿಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ಮಹಿಳೆಯರ ಸಾಮಾಜಿಕ ಸ್ಥಿತಿ-ಗತಿಗಳ ಕುರಿತು ಅದು ಅಧ್ಯಯನ ನಡೆಸಿದೆ. ಕಾರ್ಯಪಡೆಯು ಗುರುವಾರ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಹುಬ್ಬಳ್ಳಿಯ ಮೆಹ್ರುನ್ನಿಸ ಮಹಿಳಾ ಅಭಿವೃದ್ಧಿ ಸಂಸ್ಥೆ, ದಮಯಂತಿ ಬೋರೇಗೌಡ (ಮಹಿಳಾ ಕಲ್ಯಾಣ), ವಸಂತ ಮಾಲ (ಶಿಕ್ಷಣ), ಮಾಲಿನಿ ಹಾಗೂ ರಾಧಾ ಮಲ್ಲಪ್ಪ (ಕಲೆ), ಆರ್ಯಾಂಬ ಪಟ್ಟಾಭಿ (ಸಾಹಿತ್ಯ) ಮತ್ತು ಎಸ್.ಆರ್.ಅಂಬುಜ (ಅಂಗವಿಕಲ ಅಥ್ಲೀಟ್) ಇವರೆಲ್ಲರಿಗೂ ಗುರುವಾರ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೋಟಮ್ಮ ವಿವರಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಬಂಧ 3 ದಿನಗಳ ಕಾಲದ ಪ್ರದರ್ಶನ ಕಾರ್ಯಾಕ್ರಮವೊಂದು ಬುಧವಾರದಿಂದಲೇ ನಗರದಲ್ಲಿ ಪ್ರಾರಂಭವಾಗಿದೆ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...