ಋತು ಪರಿವರ್ತನೆಯ ಕಾಲ...
ಬೆಂಗಳೂರು : ಋತು ಪರಿವರ್ತನೆಯ ಕಾಲ ಇದು ಎಂಬುದು ಮರ ಗಿಡಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆಲ್ಲಾ ತಿಳಿಯುತ್ತಿದೆ. ಕೋಗಿಲೆಗಳು ಪಂಚಮಸ್ವರದಿ ಹಾಡಲು ಅಣಿಯಾಗುತ್ತಿವೆ. ಎಲ್ಲ ಮರಗಳಲ್ಲೂ ಚಿಗುರು ಒಡೆದಿದೆ. ಹಳದಿ ಬಣ್ಣಕ್ಕೆ ತಿರುಗಿದ ಹಣ್ಣೆಲೆಗಳೆಲ್ಲಾ ಉದುರಿ, ಹಸಿರೆಲೆಗಳು ರಾರಾಜಿಸುತ್ತಿವೆ.
ಕೆಂಪು ಹೂಗಳು ಕಣ್ಮನ ಸೆಳೆಯುತ್ತಿವೆ. ಶುಕ್ರವಾರದ ಬಣ್ಣದ ಹಬ್ಬಕ್ಕೆ ಈಗಲೇ ರಂಗೇರಿದೆ. ಅಂಗಡಿಗಳಲ್ಲಿ ವಿವಿಧ ಬಗೆಯ ಬಣ್ಣಗಳು ಬಂದಿವೆ. ಅಂಗಡಿಗಳಲ್ಲಿ ದೊರೆವ ಬಣ್ಣಗಳನ್ನು ಬಳಿಯುವುದರಿಂದ ಚರ್ಮರೋಗಗಳು ಬರುವ ಭೀತಿಯೂ ಇರುವ ಕಾರಣ ಮನೆಯಲ್ಲಿಯೇ ಬಣ್ಣವನ್ನು ಕೆಲವರು ತಯಾರಿಸುತ್ತಿದ್ದಾರೆ.
ಅಂದಹಾಗೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ರಾಜ್ಯಾದ್ಯಂತ ಕನಿಷ್ಠ ತಾಪಮಾನದಲ್ಲಿ ಅಲ್ಪ ಬದಲಾವಣೆ ಕಂಡುಬಂದಿದೆ. ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಕನಿಷ್ಠ ತಾಪಮಾನ ಸಾಧಾರಣ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು , ಕರಾವಳಿಯಲ್ಲಿ ಕನಿಷ್ಠ ತಾಪಮಾನ ಕೊಂಚ ಏರಿತ್ತು.
ರಾಜ್ಯದ ಅತಿ ಕಡಿಮೆ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್ ಬೆಳಗಾವಿ ವಿಮಾನ ನಿಲ್ದಾಣದಲ್ಲೂ ಅತಿ ಹೆಚ್ಚಿನ ತಾಪಮಾನ 37.4 ಡಿಗ್ರಿ ಸೆಲ್ಸಿಯಸ್ ಗುಲ್ಬರ್ಗಾದಲ್ಲೂ ದಾಖಲಾಗಿತ್ತು. ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಗರಿಷ್ಠ ತಾಪಮಾನ 32 ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.