2001-02 ರಲ್ಲಿ 487.74 ಕೋಟಿ ಆದಾಯದನಿರೀಕ್ಷೆಯಲ್ಲಿ ಟಿಟಿಡಿ
ತಿರುಪತಿ : 2001- 02ನೇ ಸಾಲಿನಲ್ಲಿ 487.74 ಕೋಟಿ ರುಪಾಯಿ ಹಣ ತನ್ನ ಬೊಕ್ಕಸ ತುಂಬಬಹುದೆಂದು ತಿರುಮಲ ವೆಂಕಟೇಶ್ವರ ದೇವಸ್ಥಾನದ ಆಡಳಿತ ದತ್ತಿ ತಿರುಮಲ ತಿರುಪತಿ ದೇವಸ್ಥಾನಂಸ್ (ಟಿಟಿಡಿ) ತನ್ನ ಆಯವ್ಯಯಪತ್ರದಲ್ಲಿ ಅಂದಾಜು ಮಾಡಿದೆ.
ಕಾಣಿಕೆಗಳಿಂದ ಸಿಂಹಪಾಲು, ಅಂದರೆ 178.76 ಕೋಟಿ ರುಪಾಯಿ ಸಂದಾಯವಾಗುವ ನಿರೀಕ್ಷೆಯಿದೆ. ಅರ್ಚನೆ ಟಿಕೇಟುಗಳಿಂದ 42.38 ಕೋಟಿ ಹಾಗೂ ವಿವಿಧೆಡೆ ತೊಡಗಿಸಿರುವ ಹಣದ ಬಡ್ಡಿ ರೂಪದಲ್ಲಿ 135.86 ಕೋಟಿ ರುಪಾಯಿ ಆದಾಯ ದತ್ತಿಯ ಬೊಕ್ಕಸ ತುಂಬಲಿದೆ ಎಂಬುದು ಟಿಟಿಡಿ ಅಂದಾಜು.
ರಾಜ್ಯ ಪ್ರಧಾನ ಕಾಯದರ್ಶಿ (ಆದಾಯ) ಎ.ವಿ.ಎಸ್.ರೆಡ್ಡಿ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಟಿಟಿಡಿಯ ಆಯವ್ಯಯಕ್ಕೆ ಅಂತಿಮ ರೂಪು ನೀಡಲಾಯಿತು. ಯಾತ್ರಾರ್ಥಿಗಳ ಕಲ್ಯಾಣ ಕಾಮಗಾರಿಗಳಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವುದೂ ಆಯವ್ಯಯ ಪಟ್ಟಿಯ ಅಂಶಗಳಲ್ಲೊಂದು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟಿಟಿಡಿ ವ್ಯವಸ್ಥಾಪಕ ಅಧಿಕಾರಿ ಪಿ.ಕೃಷ್ಣಯ್ಯ ಈ ವಿಷಯ ತಿಳಿಸಿದರು. ತಿರುಮಲದಲ್ಲಿ ಶ್ರೀನಿವಾಸ ಸಂಕೀರ್ಣ ನಿರ್ಮಾಣಕ್ಕೆ 20 ಕೋಟಿ ರುಪಾಯಿ ಹಾಗೂ ಕಲ್ಯಾಣಿ ಅಣೆಕಟ್ಟಿನಿಂದ ಶ್ರೀವಾರಿ ಮೆಟ್ಟುವಿಗೆ ನೀರು ಹಾಯಿಸಲು ಪೈಪ್ಲೈನ್ ಕಾಮಗಾರಿಗೆ 3 ಕೋಟಿ ರುಪಾಯಿ ವಿನಿಯೋಗಿಸಲಾಗುವುದು ಎಂದರು.
ಯಾವ್ಯಾವುದಕ್ಕೆ ಎಷ್ಟೆಷ್ಟು ಬಜೆಟ್ಟು
ಯಾತ್ರಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ದೇವಾಲಯದ ಅಭಿವೃದ್ಧಿಗೆ 25 ಕೋಟಿ ರುಪಾಯಿ, ಪ್ರಸ್ತುತ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಗೆ 15 ಕೋಟಿ ರುಪಾಯಿ ಮತ್ತು ಹರಿತ ಯೋಜನೆಗಾಗಿ 7 ಕೋಟಿ ರುಪಾಯಿ ವೆಚ್ಚ ಮಾಡಲಾಗುವುದು. ಟಿಟಿಡಿಯ ಧರ್ಮ ಪರಿಷತಗೆ 5 ಕೋಟಿ, ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 8 ಕೋಟಿ ಹಾಗೂ ಬಾಲಾಜಿ ಅಂಗವಿಕಲರ ಸಂಶೋಧನೆ, ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಸಂಸ್ಥೆಗೆ 4 ಕೋಟಿ ರುಪಾಯಿ ಮಂಜೂರು ಮಾಡಲಾಗಿದೆ. ರಸ್ತೆಯ ಅಗಲೀಕರಣ ಹಾಗೂ ರೇನಿಗುಂಟ ಮತ್ತು ತಿರುಪತಿ ನಡುವೆ ನಾಲ್ಕು ಸಾಲಿನ ರಸ್ತೆಗಳ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ರಸ್ತೆ ಮತ್ತು ಕಟ್ಟಡಗಳ ಇಲಾಖೆಗೆ ಕೊಡುವ ಸಾಲವನ್ನು 10.85 ಕೋಟಿ ರುಪಾಯಿಗಳಿಗೆ ಏರಿಸಲಾಗಿದೆ. ಜೊತೆಗೆ ಅರ್ಚಕರ ಕ್ಷೇಮಾಭಿವೃದ್ಧಿ ನಿಧಿಗಾಗಿ 4 ಕೋಟಿ ರುಪಾಯಿ ಮಂಜೂರಾಗಿದೆ ಎಂದು ಕೃಷ್ಣಯ್ಯ ವಿವರಿಸಿದರು.
(ಯುಎನ್ಐ)