ವಿಧಾನಸೌಧದಲ್ಲಿ ಗುಜರಾತ್ ಭೂಕಂಪದ ಛಾಯಾಚಿತ್ರ ಪ್ರದರ್ಶನ
ಬೆಂಗಳೂರು : ಭೂಕಂಪದಿಂದ ನಾಶವಾಗಿರುವ ಗುಜರಾತ್ನಲ್ಲಿ ಶಾಲಾ ಕಟ್ಟಡ ಇಲ್ಲವೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪುನರ್ ನಿರ್ಮಿಸುವ ಈರಾದೆಯನ್ನು ಕರ್ನಾಟಕ ಸರಕಾರ ವ್ಯಕ್ತಪಡಿಸಿದೆ. ಈ ಸಂಬಂಧ ಮಾತುಕತೆ ನಡೆಸಲು ಸದ್ಯದಲ್ಲೇ ರಾಜ್ಯ ಸರಕಾರದ ಪ್ರತಿನಿಧಿಗಳನ್ನೊಳಗೊಂಡ ನಿಯೋಗ ಗುಜರಾತ್ಗೆ ತೆರಳಲಿದೆ. ಈ ವಿಷಯವನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಲ್ಲಿ ಪ್ರಕಟಿಸಿದರು.
ಗುಜರಾತ್ನ ತಾಲೂಕೊಂದನ್ನು ದತ್ತು ಪಡೆದು ಇಡೀ ತಾಲೂಕನ್ನೇ ಪುನರ್ನಿರ್ಮಿಸುವುದು ರಾಜ್ಯ ಸರಕಾರದ ಉದ್ದೇಶವಾಗಿತ್ತು. ಆದರೆ, ಇದು ಕಷ್ಟ ಸಾಧ್ಯ ಹೀಗಾಗಿ ಭೂಕಂಪ ಪೀಡಿತ ಪ್ರದೇಶದಲ್ಲಿ ಗ್ರಾಮಗಳ ಪುನರ್ನಿರ್ಮಾಣ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೇ ಶಾಲಾ ಕಟ್ಟಡ ಕಟ್ಟಿಸಿಕೊಡುವ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೃಷ್ಣ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ನಾ ಕಂಡ ಗುಜರಾತ್ ಭೂಕಂಪ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರತಿನಿತ್ಯ ಭೂಕಂಪ ಪರಿಹಾರ ನಿಧಿಗಾಗಿ ಶಾಲಾ ಕಾಲೇಜು, ಸರಕಾರಿ, ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ದೇಣಿಗೆಯ ಚೆಕ್ ನೀಡುತ್ತಲೇ ಇದ್ದಾರೆ. ದೇಶ ಅನುಭವಿಸಿದ ಈ ಭೀಕರ ಪ್ರಕೋಪದಲ್ಲಿ ನೊಂದ ಜನರ ನೆರವಿಗೆ ಮುಂದಾಗಿರುವ ಕನ್ನಡಿಗರೆಲ್ಲರಿಗೂ ತಾವು ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ತಂದೆ - ತಾಯಿಗಳನ್ನು ಕಳೆದುಕೊಂಡು ಅನಾಥವಾಗಿರುವ ಹಸುಳೆ, ಮಕ್ಕಳನ್ನು ಕಳೆದುಕೊಂಡ ಪಾಲಕರು, ಮುರಿದು ಬಿದ್ದ ಕಟ್ಟಡ ಮೊದಲಾದ ಹೃದಯ ಕಲಕುವಂತಹ ನೂರಾರು ಚಿತ್ರಗಳನ್ನು ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಸೆರೆಹಿಡಿದಿದ್ದು. ಈ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಹಾಸನ ಜಿಲ್ಲೆ ಕೊಡುಗೆ : ರಾಜ್ಯದ ಕಂದಾಯ ಮಂತ್ರಿ ಎಚ್.ಸಿ. ಶ್ರೀಕಂಠಯ್ಯ ಅವರು ಬುಧವಾರ ಬೆಳಗ್ಗೆ ಹಾಸನ ಜಿಲ್ಲೆಯ ಜನತೆಯಿಂದ ಭೂಕಂಪ ಪರಿಹಾರ ನಿಧಿಗೆ ಸಂಗ್ರಹಿಸಿದ 52 ಲಕ್ಷ ರುಪಾಯಿಗಳ ಚೆಕ್ ಅನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಖನಿರಾಂ, ಪೊಲೀಸ್ ವರಿಷ್ಠಾಧಿಕಾರಿ ಸಲೀಂ, ನಾರಾಯಣಸ್ವಾಮಿ ಮೊದಲಾದವರಿದ್ದರು.
ಮುಖಪುಟ |