ಮಹಾಜನ್ ವರದಿ : ಸರ್ವಪಕ್ಷ ನಾಯಕರೊಂದಿಗೆಚರ್ಚೆ - ಕೃಷ್ಣ
ಬೆಂಗಳೂರು : ಮಹಾಜನ್ ವರದಿಯಲ್ಲಿ ಕಾಸರಗೋಡಿನ ಹೆಸರೂ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಈ ಸಂಬಂಧ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಕೇರಳದ ಮುಖ್ಯಮಂತ್ರಿಗಳು ಸಹ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿವಿವಾದದ ಪರಿಹಾರಕ್ಕೆ ಮಹಾಜನ್ ವರದಿಯ ಜಾರಿಯಾಂದೇ ಮಾರ್ಗ ಎಂದೂ ಹೇಳಿದರು. ಮಹಾಜನ್ ವರದಿಯನ್ನು ಜಾರಿಗೊಳಿಸುವುದು ಸಾಧ್ಯವೇ ಇಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ನೀಡುರುವ ಹೇಳಿಕೆಗೆ ಪ್ರತಿಕ್ರಿಯಿಸಲು ಕೃಷ್ಣ ನಿರಾಕರಿಸಿದರು.
ಈ ಹೇಳಿಕೆ ದೇಶ್ಮುಖ್ ಅವರಿಗೆ ಸಂಬಂಧಿಸಿದ್ದು, ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದ ಕೃಷ್ಣ ಅವರು ಸರ್ವಪಕ್ಷಗಳ ನಾಯಕರ ಸಭೆ ಕರೆದು ಈ ಸಂಬಂಧ ಪೂರ್ವಭಾವಿಯಾಗಿ ಚರ್ಚೆ ನಡೆಸಲಾಗುವುದು ಎಂದರು. ಬೆಳಗಾವಿಯಲ್ಲಿ ಕೇಂದ್ರ ಸಚಿವ ಮನೋಹರ್ ಜೋಷಿ ಅವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಪಕ್ಷ ಹೋರಾಟ ನಡೆಸುವುದು ಎಂದು ಹೇಳಿಕೆ ನೀಡಿದ ತರುವಾಯ ಮಹಾಜನ್ ವರದಿ ಮತ್ತೆ ಭಾರಿ ಸುದ್ದಿಯಾಗಿದೆ.