ಕರಾವಳಿ : ಮಂಜುಗಡ್ಡೆ ಘಟಕಗಳ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭ
* ರಾಜು ಮಹತಿ
ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ 100 ಕ್ಕೂ ಹೆಚ್ಚು ಖಾಸಗಿ ಮಂಜುಗಡ್ಡೆ ತಯಾರಿಕಾ ಘಟಕಗಳು ಇಂದಿನಿಂದ(ಮಾರ್ಚ್ 7) ಅನಿರ್ಧಿಷ್ಟಾವಧಿಯ ಮುಷ್ಕರ ಆರಂಭಿಸಿವೆ.
ವಿದ್ಯುತ್ನ ನಿಗದಿತ ದರವನ್ನು ಇಳಿಸಲು ಹಾಗೂ ಯೂನಿಟ್ ದರದಲ್ಲಿ ರಿಯಾಯಿತಿಗಾಗಿ ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘದ ಅಧ್ಯಕ್ಷ ಪರಶುರಾಮ್ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್, ಇಂಡಿಯಾ ಇನ್ಫೋ ಮಂಗಳೂರು ಪ್ರತಿನಿಧಿಗೆ ತಿಳಿಸಿದ್ದಾರೆ.
ಕೃಷಿ ಕ್ಷೇತ್ರದ ಪಂಪ್ಸೆಟ್ಗಳಿಗೆ ಪ್ರತ್ಯೇಕ ವಿದ್ಯುತ್ ದರ ನಿಗದಿ ಪಡಿಸಿರುವಂತೆ ಮಂಜುಗಡ್ಡೆ ತಯಾರಿಕಾ ಘಟಕಗಳಿಗೂ ಪ್ರತ್ಯೇಕ ವಿದ್ಯುತ್ ದರ ನಿಗದಿಪಡಿಸುವಂತೆ ಮತ್ತು ತೋಟಗಾರಿಕಾ ಉತ್ಪನ್ನಗಳ ಶೈತ್ಯಾಗಾರಗಳಿಗೆ ಒದಗಿಸುವ ವಿದ್ಯುತ್ಗೆ ಯೂನಿಟ್ಗೆ ಒಂದು ರೂಪಾಯಿ ಸಬ್ಸಿಡಿ ನೀಡಿದಂತೆ, ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಒದಗಿಸುವ ವಿದ್ಯುತ್ಗೂ ಸಬ್ಸಿಡಿ ಘೋಷಿಸಬೇಕು ಎಂದು ಮುಷ್ಕರ ನಿರತ ಮಂಜುಗಡ್ಡೆ ತಯಾರಿಕಾ ಘಟಕಗಳು ರಾಜ್ಯ ಸರಕಾರವನ್ನು ಆಗ್ರಹಿಸುತ್ತಿವೆ.
ಈ ಮುಷ್ಕರದಿಂದ ನೇರ ಉದ್ಯೋಗ ಮಾಡುತ್ತಿರುವ ಸುಮಾರು 2000 ಮಂದಿಗೆ ತೊಂದರೆಯಾಗಲಿದೆ. ಮಂಜುಗಡ್ಡೆ ಇಲ್ಲದೆ ಆಳ ಸಮುದ್ರ ಮೀನುಗಾರಿಕೆ ನಡೆಯುವುದಿಲ್ಲವಾದ್ದರಿಂದ, ಮೂರು ಜಿಲ್ಲೆಗಳ ಸುಮಾರು ಎರಡು ಲಕ್ಷ ಮಂದಿ ಮೀನುಗಾರರು ಕೆಲಸ ಮಾಡಲಾಗುತ್ತಿಲ್ಲ. 2,500 ಯಾಂತ್ರೀಕೃತ ದೋಣಿಗಳು ಮಂಜುಗಡ್ಡೆಯಿಲ್ಲದೆ ಸಮುದ್ರಕ್ಕಿಳಿಯುವಂತಿಲ್ಲ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ರಮಾನಾಥ ರೈ ಅವರು ಮಂಜುಗಡ್ಡೆ ತಯಾರಿಕಾ ಘಟಕಗಳ ಮಾಲಕರ ಸಂಘದ ಮುಖ್ಯಸ್ಥರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಗುರುವಾರ ಬೆಳಿಗ್ಗೆ 8 ಗಂಟೆ ಗೆ ಬೆಂಗಳೂರಿನಲ್ಲಿ ಮಾತುಕತೆ ನಡೆಯಲಿದೆ ಎಂದು ಪರಶುರಾಮಪ್ಪ ತಿಳಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...