ಮಗ ಬೀಗ ಮುರಿದ, ಅಮ್ಮ ಶಹಬ್ಭಾಸ್ ಮಗನೇ ಅಂದಳು
ಬೆಂಗಳೂರು : ಮೊಮ್ಮಗನ ಕಳ್ಳತನಕ್ಕೆ ಇಂಬು ಕೊಟ್ಟು ಮುಂದೊಂದು ದಿನ ಕಳ್ಳತನದ ಆಪಾದನೆಯ ಮೇಲೆ ಮೊಮ್ಮಗನೊಂದಿಗೆ ನೇಣಿಗೇರುವ ಮುದುಕಿಯ ಕಥೆಯಂಥದ್ದೇ ಪ್ರಕರಣ ಇಲ್ಲಿನದು. ಇಲ್ಲಿರುವವರು ಅಜ್ಜಿ - ಮೊಮ್ಮಗನ ಬದಲಾಗಿ ಅಮ್ಮ ಮತ್ತು ಮಗ.
ಅಲಸೂರು ಗೇಟ್ ಪೋಲೀಸರು, ತಿಗಳರ ಪೇಟೆಯ ಮಂಜು (18) ಹಾಗೂ ಆತನ ತಾಯಿ ಮುನಿರತ್ನ (38) ಎಂಬುವರನ್ನು ಬಂಧಿಸಿದ್ದು , ಅವರಿಂದ 19 ಕಳವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 5 ಲಕ್ಷ ರುಪಾಯಿ ಬೆಲೆಯ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜುವಿನ ಕಳ್ಳತನಕ್ಕೆ ಅಮ್ಮ ಮುನಿರತ್ನ ಕುಮ್ಮಕ್ಕು ಕೊಡುತ್ತಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಮಂಜು 7 ನೇ ತರಗತಿ ಓದಿದ್ದಾನೆ. ಅಪ್ಪ ಚಿಕ್ಕಂದಿನಲ್ಲೇ ತೀರಿಕೊಂಡ. ದುಶ್ಚಟಗಳೂ ಆಗಿನಿಂದಲೇ ಅಂಟಿಕೊಂಡವು. ಭೋಗ ಜೀವನಕ್ಕಾಗಿ ಹಗಲಿನಲ್ಲೇ ಮನೆಗಳ ಬೀಗಗಳನ್ನು ಮುರಿಯಲು ಆರಂಭಿಸಿದ. ಕಬ್ಬಿಣದ ಸರಳುಗಳಿಂದ ಮಂಜ ಬೀಗ ಮುರಿಯುತ್ತಿದ್ದ ಎನ್ನುವ ವಿಷಯವನ್ನು ತನಿಖೆಯ ಸಂದರ್ಭದಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.
ಮಂಜುವಿನ ದುಷ್ಕೃತ್ಯಗಳನ್ನು ಪ್ರೋತ್ಸಾಹಿಸುತ್ತಿದ್ದ ಮುನಿರತ್ನ , ಕೆಲವು ಕಳವಿನ ಪ್ರಕರಣಗಳಲ್ಲೂ ಭಾಗಿಯಾಗಿದ್ದಾಳೆ. ಕಳವಿನ ವಸ್ತುಗಳನ್ನು ವಿಕ್ರಯಿಸುವ ಕೆಲಸವನ್ನು ಕೂಡ ಆ ಮಹಾಮಾತೆಯೆ ನಿರ್ವಹಿಸುತ್ತಿದ್ದಳಂತೆ. ಸದ್ಯಕ್ಕೆ ಅಮ್ಮ , ಮಗ ಸರಳುಗಳನ್ನು ಎಣಿಸುತ್ತಿದ್ದಾರೆ.
(ಇನ್ಫೋ ವಾರ್ತೆ)