ಜೈವಿಕ ತಂತ್ರಜ್ಞಾನ : ಕಡಿಮೆ ಬಂಡವಾಳ, ಹೆಚ್ಚಿನ ಇಳುವರಿ
ಬೆಂಗಳೂರು : ಜೈವಿಕ ತಂತ್ರಜ್ಞಾನದ ಸಲಕರಣೆಗಳು ಕೃಷಿ ಕ್ಷೇತ್ರದಲ್ಲಿನ ಬಂಡವಾಳವನ್ನು ಕಡಿಮೆ ಮಾಡುವುದರ ಜೊತೆಗೆ ರೈತರಿಗೆ ಹೆಚ್ಚಿನ ಇಳುವರಿಯನ್ನು ಒದಗಿಸಿಕೊಡುತ್ತವೆ. ಹೆಚ್ಚಿನ ಬಂಡವಾಳ ಹಾಗೂ ಕಡಿಮೆ ಇಳುವರಿಯಿಂದ ರೈತರು ಆತ್ಮಹತ್ಯೆಗೆ ಶರಣು ಹೋಗುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು , ಈ ಸಮಸ್ಯೆಗಳಿಗೆ ಜೈವಿಕ ತಂತ್ರಜ್ಞಾನ ಉತ್ತರವಾಗಲಿದೆ ಎಂದು ಕೃಷಿ ಸಚಿವ ಜಯಚಂದ್ರ ಹೇಳಿದ್ದಾರೆ.
ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಾಧ್ಯತೆಗಳನ್ನು ಮತ್ತಷ್ಟು ಹಿಗ್ಗಲಿಸಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಸರ್ಕಾರ ನಡೆಸುವುದು ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು. ಅವರು, ಮಾನ್ಸಾಂಟೊ ಅಂತರರಾಷ್ಟ್ರೀಯ ಬೀಜ ಸಂಸ್ಥೆಯ ಸಂಶೋಧನಾ ಕೇಂದ್ರ, ಬುಧವಾರ ಏರ್ಪಡಿಸಿದ್ದ ‘ಬಯೋ ಟೆಕ್ನಾಲಜಿ : ಭಾರತದ ಕೃಷಿಗೆ ಹೊಸ ಅವಕಾಶಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರ ಇತ್ತೀಚೆಗೆ ತಾನೆ ತನ್ನ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದೆ. ಈ ಸಂಬಂಧ ವಿಜ್ಞಾನಿಗಳ ಸಲಹೆಗಳಿಗೆ ಸರ್ಕಾರ ತೆರೆದ ಮನಸ್ಸಿನಿಂದಿದೆ. ಜೈವಿಕವಾಗಿ ಅಭಿವೃದ್ಧಿಗೊಳಿಸಿದ ಬೀಜಗಳ ಬಗೆಗೆ ರೈತರಲ್ಲಿರುವ ತಪ್ಪು ಕಲ್ಪನೆಗ ಳನ್ನು ನಿವಾರಿಸಲು ವಿಜ್ಞಾನಿಗಳು ಶ್ರಮಿಸಬೇಕು ಎಂದರು.
ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಜೈವಿಕ ತಂತ್ರಜ್ಞಾನದ ಬೆಳವಣಿಗೆಯಾಂದಿಗೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟ ಜಯಚಂದ್ರ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಕರ್ನಾಟಕ ನಾಯಕನಾಗಿ ಬೆಳೆಯುವ ವಿಶ್ವಾಸ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮಾತನಾಡಿದ ಸಂಶೋಧನಾ ಕೇಂದ್ರದ ನಿರ್ದೇಶಕ ಟಿ.ಎಂ. ಮಂಜುನಾಥ್ 35 ದೇಶಗಳ 45 ಮಿಲಿಯನ್ ಎಕರೆ ಪ್ರದೇಶದಲ್ಲಿ ಜೈವಿಕ ತಂತ್ರಜ್ಞಾನವನ್ನಾಧರಿಸಿದ ಕೃಷಿ ನಡೆಯುತ್ತಿದೆ ಎಂದರು. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಪೂರೈಸಲು ಭಾರತಕ್ಕೆ ಜೈವಿಕ ತಂತ್ರಜ್ಞಾನದ ಅಗತ್ಯವನ್ನು ಎತ್ತಿ ತೋರಿಸಲು ಈ ಸಂಕಿರಣವನ್ನು ಏರ್ಪಡಿಸಲಾಗಿದೆ.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...