ಎರಡನೇ ಟೆಸ್ಟ್ಗೆ ಅಗರ್ಕರ್ ಇಲ್ಲ , ಶ್ರೀನಾಥ್ ಕೂಡ ಅನುಮಾನ ?
ಮುಂಬಯಿ : ವೈರಸ್ ಜ್ವರದಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಅಜಿತ್ ಅಗರ್ಕರ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಭಾಗವಹಿಸುವ ಸಾಧ್ಯತೆಯನ್ನು ಬಿಸಿಸಿಐ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಶರದ್ ದಿವಾಡ್ಕರ್ ತಳ್ಳಿಹಾಕಿದ್ದಾರೆ.
ಮೊದಲ ಟೆಸ್ಟ್ನ ಮೂರನೇ ದಿನವೇ ಅಗರ್ಕರ್ ವೈರಸ್ ಜ್ವರಕ್ಕೆ ತುತ್ತಾಗಿದ್ದರು. ಪ್ರಸ್ತುತ ಅವರು ಚೇತರಿಸಿಕೊಂಡಿದ್ದರೂ, ನಿಶ್ಯಕ್ತಿಯ ಕಾರಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಮೂರನೇ ಟೆಸ್ಟ್ ಹೊತ್ತಿಗೆ ಅಗರ್ಕರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು ಎಂದು ದಿವಾಡ್ಕರ್ ತಿಳಿಸಿದ್ದಾರೆ.
ಮತ್ತೊಬ್ಬ ಪ್ರಮುಖ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಕೂಡ ಎರಡನೇ ಟೆಸ್ಟ್ನಲ್ಲಿ ಆಡುವುದು ಅನುಮಾನ. ಬಲಗೈನ ತೋರು ಬೆರಳು ಮುರಿದುಕೊಂಡಿರುವ ಅವರು ದೈಹಿಕ ಅಸಾಮರ್ಥ್ಯತೆಯಿಂದ ಬಳಲುತ್ತಿದ್ದಾರೆ. ಎರಡನೆ ಟೆಸ್ಟ್ನಲ್ಲಿ ಒಂದೇ ಕೈನಿಂದ ಬ್ಯಾಟಿಂಗ್ ಆಡಿದ್ದ ಅವರು ಆಸ್ಟ್ರೇಲಿಯಾ ಆಟಗಾರರು ಹಾಗೂ ಪ್ರೇಕ್ಷಕರ ಅನುಕಂಪಕ್ಕೆ ಪಾತ್ರರಾಗಿದ್ದರು. ಮಾರ್ಚ್ 11, ಭಾನುವಾರದಿಂದ ಕೋಲ್ಕತಾದಲ್ಲಿ ಎರಡನೇ ಟೆಸ್ಟ್ ಪ್ರಾರಂಭವಾಗಲಿದೆ. ಮೂರನೇ ಟೆಸ್ಟ್ ಚೆನ್ನೈನಲ್ಲಿ ಮಾರ್ಚ್ 18 ರಿಂದ ಪ್ರಾರಂಭವಾಗುವುದು.
(ರಾಯ್ಟರ್ಸ್)