ಈ ರಜೆಯಲ್ಲಿ ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸಲಾಗದೇ?
ಬೆಂಗಳೂರು : ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳನ್ನು ಅಜ್ಜಿ ಮನೆಗೆ ಕರೆದುಕೊಂಡು ಹೋಗಲು ನಿಮಗೆ ಪುರುಸೊತ್ತಿಲ್ವಾ ? ಇಲ್ಲಿದೆ -ಪುಟಾಣಿಗಳಿಗೊಂದು ಬೇಸಿಗೆ ಕಾರ್ಯಕ್ರಮ. ಪೇಟೆಯಲ್ಲಿ ಬೆಳೆದ ನಿಮ್ಮ ಮಕ್ಕಳಿಗೆ ಜಾನಪದ ಲೋಕವನ್ನು ತೋರಿಸುವ ಉದ್ದೇಶದಿಂದ ರಾಜ್ಯ ಮಟ್ಟದ ವಸತಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷ್ಣಾಪುರ ದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನವರು 10ರಿಂದ 15 ವರ್ಷದೊಳಗಿನ ಮಕ್ಕಳಿಗೆ ಈ ಶಿಬಿರವನ್ನು ಏರ್ಪಡಿಸಿದ್ದಾರೆ. ಶಿಬಿರ ಏಪ್ರಿಲ್ 16ರಿಂದ ಮೇ 6ರವರೆಗೆ ನಡೆಯುತ್ತದೆ. ಮಕ್ಕಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
ಶಿಬಿರದಲ್ಲಿ ಗ್ರಾಮೀಣ ಪರಿಸರದ ಹತ್ತು ಹಲವು ವೈಚಿತ್ರ್ಯಗಳನ್ನು ಮಕ್ಕಳ ಮುಂದೆ ಬಿಚ್ಚಿಡಲಾಗುವುದು. ಗುಡಿ ಕೈಗಾರಿಕೆ, ಪ್ರದರ್ಶನ ಕಲೆಗಳ ಪ್ರಾತ್ಯಕ್ಷಿಕೆ, ಜನಪದ ಕ್ರೀಡೆಗಳನ್ನು ಕಲಿಸುವುದರೊಂದಿಗೆ ಮೈಸೂರು ವಿಶ್ವ ವಿದ್ಯಾಲಯದ ಜನಪದ ಲೋಕವನ್ನು ಮಕ್ಕಳಿಗೆ ಪರಿಚಯಿಸಲಾಗುವುದು. ಅಲ್ಲದೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಹಿರಿಯರ ಜೊತೆಗೆ ಮಕ್ಕಳು ತಮ್ಮ ಅಚ್ಚರಿ, ಕುತೂಹಲಗಳಿಗೆ ಉತ್ತರ ಪಡೆಯಬಹುದು.
ನಿಮ್ಮ ಮಕ್ಕಳನ್ನು ಈ ಚಿಣ್ಣರ ಶಿಬಿರಕ್ಕೆ ಕಳುಹಿಸಬೇಕೆಂದಿದ್ದರೆ ಆಯೋಜಕರನ್ನು ಇವತ್ತೇ ಸಂಪರ್ಕಿಸಿ. ನಿಮ್ಮ ವಿಳಾಸ ಮತ್ತು ವಿವರಗಳಿರುವ ಅರ್ಜಿಯಾಂದಿಗೆ, ಸ್ಟಾಂಪ್ ಸೈಜಿನ ಮೂರು ಫೋಟೋ ಕೂಡ ಲಗತ್ತಿಸಬೇಕು. ವಿಳಾಸ : ಡಾ. ಎಂ. ಬೈರೇಗೌಡರು, ಅಧ್ಯಕ್ಷರು, ಮುದ್ದಪ್ಪ ಸ್ಮಾರಕ ಟ್ರಸ್ಟ್ ನಂ. 19, ಮೂರನೇ ಕ್ರಾಸ್, 8ನೇ ಮುಖ್ಯ ರಸ್ತೆ, ಆರ್ಪಿಸಿ ಲೇ ಔಟ್, ಬೆಂಗಳೂರು- 40 . ಫೋನ್ - 080-3409512.
(ಇನ್ಫೋ ವಾರ್ತೆ)