ಶಿಕ್ಷಕರು ಪಾಠ ಹೇಳಿ ಕೊಡಬಹುದು, ಹೊಡೆಯುವುದು ಅಪರಾಧ !
ನವದೆಹಲಿ : ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಹಾಗೂ ಶಿಕ್ಷಕರು ಈ ಸುದ್ದಿಯನ್ನು ಯಾವ ರೀತಿ ಸ್ವೀಕರಿಸುತ್ತಾರೋ ಈಗಲೇ ಹೇಳುವುದು ಕಷ್ಟ . ಆದರೆ, ಮುಂದಿನ ದಿನಗಳಲ್ಲಿ ಪ್ರತಿದಿನವೂ ಶಾಲೆಯಾಂದು ಪಂಚಾಯ್ತಿ ಕಟ್ಟೆಯಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಂತೂ ಇದೆ.
ಸುದ್ದಿ ಇಷ್ಟೇ - ಶಾಲೆಗಳಲ್ಲಿ ಮಕ್ಕಳನ್ನು ಥಳಿಸುವುದು ಅಪರಾಧವೆನ್ನುವ ನೀತಿ ಸದ್ಯದಲ್ಲಿಯೇ ಜಾರಿಗೊಳ್ಳಲಿದೆ. ಈ ವಿಷಯವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಮುರುಳಿ ಮನೋಹರ ಜೋಷಿ ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಕಟಿಸಿದರು. ಈ ಸಂಬಂಧ ಕೇಂದ್ರ ಸರ್ಕಾರ ಆಯೋಗವೊಂದನ್ನು ರಚಿಸುವುದು ಎಂದು ಜ್ಞಾನೇಶ್ವರ್ ಮಿಶ್ರಾ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ತಿಳಿಸಿದರು.
ಮಕ್ಕಳನ್ನು ದಾರುಣವಾಗಿ ಶಿಕ್ಷಿಸಿದ ಅನೇಕ ಉದಾಹರಣೆಗಳು ರಾಜಧಾನಿಯಲ್ಲೇ ವರದಿಯಾಗಿವೆ. ಶಿಕ್ಷಕರು ನೀಡಿದ ಶಿಕ್ಷೆಯಿಂದಾಗಿ ಮಕ್ಕಳು ಕಣ್ಣು ಕಳೆದುಕೊಂಡಿರುವುದೂ ಉಂಟು. ಇಂಥಾ ಪ್ರಕರಣಗಳಿಗೆ ತಡೆಹಾಕುವ ಉದ್ದೇಶದಿಂದ ಶಿಕ್ಷಕರ ಶಿಕ್ಷೆಗೆ ತಡೆ ಹಾಕಲು ನೀತಿಯನ್ನು ರೂಪಿಸುತ್ತಿರುವುದಾಗಿ ಜೋಶಿ ಹೇಳಿದರು.
ಹದಿಮೂರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣದ ಸೌಲಭ್ಯಗಳನ್ನು ಕಲ್ಪಿಸುವ 9 ನೇ ಪಂಚವಾರ್ಷಿಕ ಯೋಜನೆಯಲ್ಲಿನ ಕಾರ್ಯಕ್ರಮ 10 ನೇ ಪಂಚವಾರ್ಷಿಕ ಯೋಜನೆಯಲ್ಲಿಯೂ ಮುಂದುವರಿಯುವುದು. ಕುರುಡು ಮಕ್ಕಳಿಗೆ ಯೋಜನೆಯಾಂದನ್ನು ರೂಪಿಸಲು ರಾಜ್ಯಸರ್ಕಾರಗಳನ್ನು ಕೇಳಲಾಗಿದ್ದು , ಆ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುವುದು. ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದ ಮೊತ್ತವನ್ನು ಸಾವಿರ ರುಪಾಯಿಗೆ ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದರು.
(ಯುಎನ್ಐ)