ದುರುಗಮ್ಮ ಜಾತ್ರೆಯಲ್ಲಿ ಉರುಳಿದ ಕೋಣ, ಕುರಿ, ಕೋಳಿಯ ತಲೆ
ಕೊಪ್ಪಳ : ಬಲಿ ಜಾತ್ರೆ ಎಂದು ಖ್ಯಾತವಾದ ಕುಷ್ಟಗಿಯ ದೊಣ್ಣೆಗುಡ್ಡದ ದುರ್ಗಮ್ಮನ ಜಾತ್ರೆಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಭಕ್ತಾದಿಗಳು ನೂರಾರು ಕೋಳಿ, ಕುರಿ ಹಾಗೂ ಹತ್ತಕ್ಕೂ ಹೆಚ್ಚು ಕೋಣಗಳನ್ನು ಬಲಿಕೊಟ್ಟ ವರದಿಗಳು ನಗರವನ್ನು ತಲುಪಿವೆ.
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿಯ ಜಾತ್ರೆಯಲ್ಲಿ ಪ್ರಾಣಿಬಲಿ ವರ್ಷೇ ವರ್ಷೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪ್ರಾಣಿಬಲಿ ನೀಡುವುದನ್ನು ಕಟ್ಟು ನಿಟ್ಟಾಗಿ ತಡೆಗಟ್ಟಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಇದಕ್ಕಾಗಿಯೇ ನೂರಾರು ಪೊಲೀಸರನ್ನು ಈ ಗ್ರಾಮದಲ್ಲಿ ನಿಯೋಜಿಸಲಾಗಿತ್ತು.
ಫೆ.23ರಿಂದ 26ರವರೆಗೆ ದೊಣ್ಣೆಗುಡ್ಡದಲ್ಲಿ ನಡೆದ ಮೂರು ದಿನಗಳ ಜಾತ್ರೆ ಸಂದರ್ಭದಲ್ಲಿ ಪ್ರಾಣಿಗಳನ್ನು ದೇವರಿಗೆ ಬಲಿ ನೀಡದಂತೆ ಗ್ರಾಮಸ್ಥರ ಮನವೊಲಿಸಲು ಗ್ರಾಮಸಭೆಯನ್ನೂ ನಡೆಸಲಾಗಿತ್ತು. ಊರಿನ ತುಂಬೆಲ್ಲಾ ‘ದಯಯೇ ಧರ್ಮದ ಮೂಲವಯ್ಯ’ ಎಂಬ ಬ್ಯಾನರ್ಗಳನ್ನು ಕಟ್ಟಲಾಗಿತ್ತು. ಕರಪತ್ರ ಹಂಚಲಾಗಿತ್ತು. ಸರಕಾರದ ಆದೇಶ ಮೀರಿ ಪ್ರಾಣಿಬಲಿ ನೀಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಈ ಎಲ್ಲದರ ನಡುವೆಯೂ ಭಕ್ತಾದಿಗಳು ಮೂರು ದಿನದ ಅವಧಿಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಹತ್ತು ಕೋಣ, ನೂರಾರು ಕೋಳಿ, ಕುರಿಗಳನ್ನು ಕಡಿದು ತಮ್ಮ ಹರಕೆ ತೀರಿಸಿದರು. ದೇವರಿಗೆ ಬಲಿ ನೀಡದಂತೆ ತಡೆದರೆ, ತಮಗೂ ಪಾಪ ಸುತ್ತಿಕೊಳ್ಳುತ್ತದೆ ಎಂದು ಕೆಲವರು ಪೊಲೀಸರು ಕಂಡೂ ಕಾಣದಂತೆ ಸುಮ್ಮನಿದ್ದರು ಎಂದೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಜಾತ್ರೆಯ ಹಿಂದಿನ ದಿನ ಅಮಾವಾಸ್ಯೆಯ ಕತ್ತಲಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಬಲಿ ನೀಡಿದರು. ಪ್ರಾಣಿದಯಾ ಸಂಘದ ಸದಸ್ಯರು ತಿಂಗಳುಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಪ್ರಾಣಿಬಲಿ ತಡೆಯುವಂತೆ ಮನವಿ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಅಯಾಚಿತ್ ಅವರು ಗ್ರಾಮದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿ, ಪೊಲೀಸ್ ತುಕಡಿಯನ್ನು ನಿಯೋಜಿಸಿದ್ದರು.
(ಕೊಪ್ಪಳ ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...