ಮೂರು ಮತ್ತೊಂದು ಅಧಿಕಾರಿಗಳಿಂದ ದಿನಕರ್ ಬೀಳ್ಕೊಡುಗೆ
ಬೆಂಗಳೂರು : ಪೊಲೀಸ್ ಪ್ರಮುಖರ ಗೈರುಹಾಜರಿಯಲ್ಲಿ ರಾಜ್ಯದ 14ನೇ ಪೊಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ಅವರ ಬೀಳ್ಕೊಡುಗೆ ಸಮಾರಂಭ ಬುಧವಾರ ನಡೆಯಿತು.
ಕಾರಾಗೃಹ ವಿಭಾಗದ ಡಿಜಿ ಎಲ್.ರೇವಣಸಿದ್ಧಯ್ಯ, ಜಂಟಿ ಆಯುಕ್ತರಾದ ಅಜಯ್ ಕುಮಾರ್ ಹಾಗೂ ಬಿ.ಎನ್.ನಾಗರಾಜ್, ಅಪರ ಪೊಲೀಸ್ ನಿರ್ದೇಶಕ ವೈ.ಎಸ್.ರಾವ್ ಮತ್ತು ದಿನಕರ್ ಜಾಗೆಗೆ ಬರಲಿರುವ (?) ಹೋಂ ಗಾರ್ಡ್ಸ್ನ ಡಿಜಿ ಕೆ.ಶ್ರೀನಿವಾಸನ್ ಈ ಪೈಕಿ ಯಾರೊಬ್ಬರೂ ಸಮಾರಂಭದಲ್ಲಿ ಹಾಜರಿರಲಿಲ್ಲ.
ತಮ್ಮ 38 ವರ್ಷಗಳ ವೃತ್ತಿ ಜೀವನದ ಹಾದಿಯನ್ನು 45 ನಿಮಿಷಗಳ ಕಾಲ ಭಾವಾವೇಶದಿಂದ ಬಣ್ಣಿಸಿದ ದಿನಕರ್, ತಾವು ಹಾಗೂ ತಮ್ಮ ಕುಟುಂಬ ಪಟ್ಟ ಕಷ್ಟಗಳನ್ನು ಒಂದೊಂದಾಗಿ ಬಿಚ್ಚಿಟ್ಟರು. ತಮ್ಮ ಹೋರಾಟ ನ್ಯಾಯಪರವಾದದ್ದೆಂದು ಹಲವಾರು ಮಗ್ಗಲುಗಳೊಂದಿಗೆ ವಿವರಿಸಿದರು.
ಪ್ರತಿಯಾಬ್ಬ ಪೊಲೀಸ್ ಅಧಿಕಾರಿಗೂ ಸಮಾರಂಭದ ಪ್ರತ್ಯೇಕ ಆಮಂತ್ರಣ ಪತ್ರಗಳನ್ನು ವಿತರಿಸಲಾಗಿದ್ದು, ನೇಮದ ಪ್ರಕಾರ ಸಮಾರಂಭಕ್ಕೆ ಹಾಜರಾಗಬೇಕು. ಹಾಗಂತ ಅದು ಕಡ್ಡಾಯವೇನೂ ಅಲ್ಲ. ಬೀಳ್ಕೊಡುವ ಅಧಿಕಾರಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿರುವ ಅಧಿಕಾರಿಗಳು ಸಾಮಾನ್ಯವಾಗಿ ಸಮಾರಂಭಕ್ಕೆ ಹಾಜರಾಗದೆ ಇರುವುದಿಲ್ಲ. ಹಾಜರಾಗುವುದು ಬಿಡುವುದು ವೈಯಕ್ತಿಕ ವಿಚಾರವಷ್ಟೆ ಎಂದು ಸಮಾರಂಭದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಯಾಬ್ಬರು ಹೇಳಿದರು.
ಒಟ್ಟಿನಲ್ಲಿ ದಿನಕರ್ ಬಗ್ಗೆ ಪೊಲೀಸ್ ವಲಯಗಳಲ್ಲೇ ಸಾಕಷ್ಟು ಅಸಮಾಧಾನ ಅಚ್ಚೊತ್ತಿದೆ ಎಂಬುದನ್ನು ಸಮಾರಂಭ ಪ್ರತಿನಿಧಿಸುತ್ತಿತ್ತು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...