ಎದೆ ಗಟ್ಟಿ ಮಾಡಿಕೊಳ್ಳಿ, ಇಂದು ಕೇಂದ್ರ ಬಜೆಟ್ 2001-2002
ನವದೆಹಲಿ : ಇಂದು ಬುಧವಾರ. ಫೆ. 28. ಕೇಂದ್ರ ಬಜೆಟ್ ಮಂಡನೆಯ ದಿನ. ಗುಜರಾತ್ ಭೂಕಂಪದಿಂದ ಉಂಟಾದ ಭಾರಿ ನಷ್ಟ ಸರಿತೂಗಿಸಲು ಕೇಂದ್ರ ಬಜೆಟ್ ಕಠಿಣವಾಗಿರುತ್ತದೆ ಎಂಬುದು ಎಲ್ಲರ ನಿರೀಕ್ಷೆ. ಡಬ್ಯುಟಿಓ ನೊಂದಿಗಿನ ಒಪ್ಪಂದವೂ ಇದಕ್ಕೆ ಪೂರಕವಾಗಿದ್ದು, ನಾಕರಿಕರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯೇ ಹೆಚ್ಚು.
ಈಗಾಗಲೇ ಪ್ರಧಾನಿ ವಾಜಪೇಯಿ ಅವರು ಈ ಸಾಲಿನ ಬಜೆಟ್ ಕಠಿಣವಾಗಿರುತ್ತದೆ ಎಂಬ ಸುಳಿವು ನೀಡಿದ್ದಾರೆ. ರೈಲ್ವೆ ಬಜೆಟ್ನಲ್ಲಿ ಕೂಡ ಭಾರಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ಪಶ್ಚಿಮ ಬಂಗಾಳ ಹಾಗೂ ಇನ್ನಿತರ ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕೇಂದ್ರ ಸರಕಾರ ಅಂತಹ ಹೆಚ್ಚಿನ ಹೊರೆಯನ್ನೇನೂ ಜನರ ಮೇಲೆ ಹೊರಿಸಲಿಲ್ಲ.
ಆದರೆ, ಈ ಬಾರಿಯ ರೈಲ್ವೆ ಬಜೆಟ್ ಮಧ್ಯಂತರ ಬಜೆಟ್ನಂತಿದ್ದು, ಚುನಾವಣೆಗಳ ನಂತರ ದರ ಏರಿಸಿ ಹೊಸ ಬಜೆಟ್ ರೂಪುರೇಷೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ಸೂಚನೆಯನ್ನು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಲೋಕಸಭೆಯಲ್ಲಿ ಕೊಟ್ಟಿದ್ದಾರೆ. ಈ ಮಧ್ಯೆ ಬುಧವಾರ ಸಂಸತ್ತಿನಲ್ಲಿ 2001-2002ರ ಸಾಲಿನ ಬಜೆಟ್ ಮಂಡಿಸಲು ವಿತ್ತ ಸಚಿವ ಯಶವಂತ ಸಿನ್ಹ ತೀವ್ರ ಕಸರತ್ತು ನಡೆಸಿದ್ದಾರೆ. ಕತ್ತಿಯ ಅಲುಗಿನ ಮೇಲೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಪ್ರಸ್ತುತ ಪ್ರಕೃತಿ ವಿಕೋಪ, ಕೃಷಿ ಹಾಗೂ ಸೇವಾ ವಲಯಗಳಲ್ಲಿನ ಕಳಪೆ ಸಾಧನೆಯಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಸರಿಪಡಿಸಲು ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ಯಾವ ಯಾವ ಹೆಜ್ಜೆಗಳನ್ನು ಇಡಲಾಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ.