38 ವರ್ಷಗಳ ಸಾರ್ಥಕ ಸೇವೆ, ಬುಧವಾರ ದಿನಕರ್ಗೆ ಬೀಳ್ಕೊಡುಗೆ
ಬೆಂಗಳೂರು : ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಅವರು ತಮ್ಮ ಸೇವಾವಧಿಯನ್ನು ವಿಸ್ತರಿಸುವಂತೆ ಮುಖ್ಯಮಂತ್ರಿಗಳ ಬಳಿ ಮಾಡಿಕೊಂಡಿರುವ ಮನವಿಗೆ ಗುಣಾತ್ಮಕ ಪ್ರತಿಕ್ರಿಯೆ ಈವರೆಗೆ ವ್ಯಕ್ತವಾಗಿಲ್ಲದಿರುವುದರಿಂದ, ಫೆ. 28 ರಂದು ದಿನಕರ್ ನಿವೃತ್ತಿ ಹೊಂದುವುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಇದರೊಂದಿಗೆ ಸಿಬಿಐ ನಿರ್ದೇಶಕರಾಗುವ ದಿನಕರ್ ಕನಸು ಭಗ್ನಗೊಂಡಿದೆ.
ಫೆಬ್ರವರಿ 28ರಂದು ದಿನಕರ್ ಅವರನ್ನು ಔಪಚಾರಿಕವಾಗಿ ಬೀಳ್ಕೊಡಲು ಪೊಲೀಸ್ ಇಲಾಖೆ ಸಿದ್ಧತೆಗಳನ್ನು ನಡೆಸುತ್ತಿದೆ.
ಬುಧವಾರ ಬೆಳಿಗ್ಗೆ 8 ಗಂಟೆಗೆ ಕೋರಮಂಗಲದ ಪೊಲೀಸ್ ಗ್ರೌಂಡ್ನಲ್ಲಿ ದಿನಕರ್ ಅವರ ಬೀಳ್ಕೊಡುಗೆ ಪ್ರಯುಕ್ತ ರಾಜ್ಯ ರಿಸರ್ವ್ ಪೊಲೀಸರಿಂದ ಸಾಂಪ್ರದಾಯಿಕ ಪೊಲೀಸ್ ಪೆರೇಡನ್ನು ಆಯೋಜಿಸಲಾಗಿದೆ.
ರಾಜ್ಯದ ಹದಿನಾಲ್ಕನೇ ಪೊಲೀಸ್ ಮುಖ್ಯಸ್ಥರಾದ ದಿನಕರ್ ಅವರು ತಮ್ಮ 38 ವರ್ಷಗಳ ಅವಧಿಯ ಸೇವೆಯಿಂದ ಬುಧವಾರ ನಿವೃತ್ತರಾಗುವರು. ಸೇವಾವಧಿಯುದ್ದಕ್ಕೂ ದಿಟ್ಟ ನಿರ್ಧಾರ ಹಾಗೂ ಪ್ರಾಮಾಣಿಕತೆಗೆ ಅವರು ಹೆಸರಾಗಿದ್ದರು. ಅನೇಕ ವೇಳೆ ತಮಗೆ ಅನ್ಯಾಯವಾದಾಗ ಸರ್ಕಾರದ ವಿರುದ್ಧ ಬಂಡೆದ್ದು ನ್ಯಾಯಾಲಯದ ಕಟ್ಟೆ ಹತ್ತಿದ್ದರು. ತಮ್ಮ ಸೇವಾ ಜೇಷ್ಠತೆಯನ್ನು ಕಡೆಗಣಿಸಿ, ಪಟೇಲ್ ನೇತೃತ್ವದ ಸರ್ಕಾರ ಟಿ. ಶ್ರೀನಿವಾಸಲು ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ನಿಯಮಿಸಿದಾಗ ದಿನಕರ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಕಾನೂನು ಸಮರದಲ್ಲಿ ಯಶಸ್ಸು ಕಂಡಿದ್ದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...