ಮಾ.26 ರಂದು 2001-02 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ
ಬೆಂಗಳೂರು : 2001-02 ನೇ ಸಾಲಿನ ರಾಜ್ಯ ಬಜೆಟ್ಟನ್ನು ಮಾರ್ಚ್ 26 ರಂದು ಮಂಡಿಸುವ ಇಂಗಿತವನ್ನು ಸ್ವತಃ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವ್ಯಕ್ತಪಡಿಸಿದ್ದಾರೆ. ಅವರು, ರೈತರಿಗೆ ಅಗತ್ಯ ಮಾಹಿತಿ ಪೂರೈಸುವ ರಾಜ್ಯ ಕೃಷಿ ಇಲಾಖೆಯ ರೈತಮಿತ್ರ ವೆಬ್ಸೈಟನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದ ರು.
ಪ್ರಸ್ತುತ ರಾಜ್ಯದಲ್ಲಿ ಗುರ್ತಿಸಿರುವ 683 ಬ್ಲಾಕ್ಗಳ ಬದಲಾಗಿ 745 ಬ್ಲಾಕ್ಗಳಲ್ಲಿ ಇಲಾಖೆಯು ರೈತಮಿತ್ರ ಕೇಂದ್ರಗಳನ್ನು ಸ್ಥಾಪಿಸುವ ಬಗೆಗೆ ಕೃಷ್ಣ ವಿಶ್ವಾಸ ಸೂಚಿಸಿದರು. ಮಾಹಿತಿ ತಂತ್ರಜ್ಞಾನದ ಫಲವನ್ನು ರೈತರಿಗೆ ದೊರಕಿಸಿಕೊಡಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ರೈತಮಿತ್ರದಂಥಾ ಯೋಜನೆಗಳಿಂದಾಗಿ ಐಟಿಯ ಫಲ ಸಾಮಾನ್ಯರಿಗೂ ದಕ್ಕುತ್ತದೆ ಎಂದರು.
ರಾಜ್ಯದ ರೈತಮಿತ್ರ ಯೋಜನೆಯ ಪರಿಕಲ್ಪನೆ ಕೇಂದ್ರದ ಇಂಥದ್ದೇ ಯೋಜನೆಯ ಬಿಂಬವಾಗಿದೆ. ಈ ಯೋಜನೆಯನ್ನು ಅನುಸರಿಸುವಂತೆ ಕೇಂದ್ರ ಕೃಷಿ ಸಚಿವ ನಿತೀಶ್ಕುಮಾರ್ ಇತರ ರಾಜ್ಯಗಳಿಗೂ ಸೂಚನೆ ನೀಡಿದ್ದಾರೆ. ಪ್ರತಿಯಾಂದು ರೈತಮಿತ್ರ ಕೇಂದ್ರವೂ ಕಂಪ್ಯೂಟರನ್ನು ಹೊಂದಿದ್ದು, ಹೊಸದಾಗಿ ಉದ್ಘಾಟಿಸಲಾದ ವೆಬ್ಸೈಟ್ ಜಾಲದ ವ್ಯಾಪ್ತಿಯಲ್ಲಿರುತ್ತದೆ ಎಂದು ಕೃಷ್ಣ ಹೇಳಿದರು.
ಹೊಸ ವೆಬ್ಸೈಟ್, ಹವಾಗುಣ, ಉತ್ಪಾದನೆ, ಗೊಬ್ಬರ ಹಾಗೂ ಬೀಜಗಳ ಸ್ಥಿತಿಗತಿ, ಮಾರುಕಟ್ಟೆ ಸಮಾಚಾರ, ರೈತರಿಗೆ ಟಿಪ್ಸ್ಗಳು ಮಾತ್ರವಲ್ಲದೆ ಕೃಷಿಗೆ ಸಂಬಂಧಿಸಿದ ಇತರ ವೆಬ್ಸೈಟ್ಗಳ ಮಾಹಿತಿಯನ್ನೂ ನೀಡುತ್ತದೆ. ಈ http;//raitamitra.kar.nic.in ವೆಬ್ಸೈಟ್ ವಿನ್ಯಾಸವನ್ನು ನ್ಯಾಶನಲ್ ಇನ್ಫಾರ್ಮ್ಯಾಟಿಕ್ಸ್ ಸಂಸ್ಥೆ ರೂಪಿಸಿದೆ.
(ಯುಎನ್ಐ)