ಜನರೇಟರ್ ಇಟ್ಟುಕೊಂಡವರು ಬಚಾವ್
ಬೆಂಗಳೂರು : ಏರುತ್ತಿದೆ ಬಿಸಿಲು, ಇಳಿಯುತ್ತಿದೆ ಬೆವರು, ಈ ಮಧ್ಯೆ ಶರಾವತಿ, ನಾಗಝರಿ ಹಾಗೂ ವಾರಾಹಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಶುಕ್ರವಾರ ಸಂಭವಿಸಿದ ತಾಂತ್ರಿಕ ತೊಂದರೆಯಿಂದ ಬೆಂಗಳೂರೂ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ನಿಲುಗಡೆ ಆಗಿತ್ತು. ಉರಿಯುವ ಬಿಸಿಲು, ಗಾಳಿ ಸುಳಿಯದ ರಾತ್ರಿಯಲ್ಲಿ ಸರಕಾರಿ ವಿದ್ಯುತ್ತನ್ನೇ ನಂಬಿ ಕೆಟ್ಟವರಿಗೆ ನಮ್ಮ ಅನುತಾಪಗಳು. ಜನರೇಟರ್ ಗಾಳಿಯಲ್ಲಿ ನಿದ್ದೆ ಹೋದವರನ್ನು ಕಂಡರೆ ಹೊಟ್ಟೆ ಕಿಚ್ಚು !
ಪ್ರಮುಖ ಪಟ್ಟಣಗಳಲ್ಲಿ ಕೆಲವೇ ಗಂಟೆಗಳ ನಂತರ ವಿದ್ಯುತ್ ಪೂರೈಕೆ ಆದರೂ, ಇನ್ನೂ ಬಹುತೇಕ ಗ್ರಾಮಗಳು ಗಾಡಾಂಧಕಾರದಲ್ಲಿವೆ. ತಲೆಯ ಮೇಲೆ ಫ್ಯಾನ್ ತಿರುಗದೆ ನಿಜವಾದ ಬಿಸಿಲ ಬೇಗೆಯ ಅನುಭವ ಆಗಿದೆ. ಜನ ಸೆಕೆಯಪ್ಪೋ ಸೆಕೆ ಎನ್ನುತ್ತಿದ್ದಾರೆ. ಇನ್ನೂ ಬೆಂಗಳೂರು, ಹುಬ್ಬಳ್ಳಿ - ಧಾರವಾಡ, ದಕ್ಷಿಣ ಕನ್ನಡ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ.
ವಿದ್ಯುತ್ ಪೂರೈಕೆ ನಿಂತ ಹಾಗೆಲ್ಲಾ ಬಿಸಿಲ ಝಳ ಎಷ್ಟು ಎಂಬುದು ಮನೆಯಲ್ಲಿ ಕುಳಿತವರಿಗೂ ವೇದ್ಯವಾಗುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಎಂದಿನಂತೆ ಒಣಹವೆ ಮುಂದುವರಿದಿದೆ. ಉತ್ತರ ಒಳನಾಡಿನ ಕೆಲವೆಡೆ, ದಕ್ಷಿಣ ಒಳನಾಡಿನ ಅಲ್ಲಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ಕರಾವಳಿಯಲ್ಲಿ ಮಾತ್ರ ಅಲ್ಪ ಬದಲಾವಣೆ ಆಗಿದೆ.
ರಾಜ್ಯದ ಅತಿ ಕನಿಷ್ಠ ತಾಪಮಾನ 14.3 ಡಿಗ್ರಿ ಸೆಲ್ಸಿಯಸ್ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು. ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಖ್ಯವಾಗಿ ಶುಭ್ರ ಆಕಾಶ ಇದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹೇಳಿದೆ ಹವಾಮಾನ ವೀಕ್ಷಣಾಲಯದ ವರದಿ.