25ರಂದು ತುಮಕೂರು ವರ್ತಕರ ಸಂಘದಅಮೃತ ಮಹೋತ್ಸವ
ತುಮಕೂರು : ತುಮಕೂರಿನ ಧಾನ್ಯ ವ್ಯಾಪಾರಿಗಳ ಸಂಘಕ್ಕೆ 75 ವರ್ಷ. ಈ ಹಿನ್ನೆಲೆಯಲ್ಲಿ ಎ.ಪಿ.ಎಂ.ಸಿ. ಆವರಣದಲ್ಲಿ 25ರ ಭಾನುವಾರ ಅಮೃತಮಹೋತ್ಸವ. ಈ ವಿಷಯವನ್ನು ಸಂಘದ ಅಧ್ಯಕ್ಷ ಸಿ.ಎಲ್. ಶಿವಣ್ಣ ತಿಳಿಸಿದ್ದಾರೆ. ಈ ಸುಸಂದರ್ಭದಲ್ಲಿ ಸದಸ್ಯರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸಹ ರಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಕಾರ್ಯಕ್ರಮವನ್ನು ಭಾನುವಾರ ಬೆಳಗ್ಗೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ತಾವೇ ವಹಿಸುತ್ತಿರುವುದಾಗಿ ಅವರು ಹೇಳಿದರು. ಸಂಘದ ಸ್ಮರಣ ಸಂಚಿಕೆಯನ್ನು ಸಚಿವ ಟಿ.ಬಿ. ಜಯಚಂದ್ರ ಬಿಡುಗಡೆ ಮಾಡುತ್ತಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಜಯರಾಮರಾಜೇ ಅರಸ್, ಸಚಿವ ಡಿ.ಬಿ. ಇನಾಂದಾರ್, ಡಾ. ಜಿ. ಪರಮೇಶ್ವರ್ ಆಗಮಿಸುವರು ಎಂಬ ವಿವರಗಳನ್ನೂ ಅವರು ನೀಡಿದರು.
ವಸ್ತು ಪ್ರದರ್ಶನ ಸಮಾರೋಪ : ಶಿವರಾತ್ರಿ ಜಾತ್ರೆಯ ಅಂಗವಾಗಿ ಫೆ.12ರಿಂದ ಆರಂಭಗೊಂಡಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ 26ರಂದು ಮುಕ್ತಾಯಗೊಳ್ಳಲಿದೆ. ಈ ಸಂಬಂಧ ನಡೆಯಲಿರುವ ಸಮಾರೋಪ ಸಮಾರಂಭ ಡಾ. ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಶಾಸಕ ಎಸ್. ಶಿವಣ್ಣ ವಹಿಸುವರು.
ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್, ಜಿಲ್ಲಾಧಿಕಾರಿ ಜಯರಾಮರಾಜೇ ಅರಸ್, ಕಾವೇರಿ ಟಿ.ವಿ.ಯ ಸುದ್ದಿಸಂಪಾದಕ ಶಶಿಧರಭಟ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಾತ್ರೆಯ ಪ್ರಯುಕ್ತ ಶನಿವಾರ ಸಂಜೆ ಪಿ.ಜಿ. ಸೆಂಟರ್ ರಂಗ ತಂಡದಿಂದ ರಕ್ತಬೀಜಾಸುರ ಬಯಲಾಟ ಪ್ರದರ್ಶನ ಹಾಗೂ ಶಾಂಭವಿ ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನವೂ ನಡೆಯಲಿದೆ.
(ತುಮಕೂರು ಪ್ರತಿನಿಧಿಯಿಂದ)