ಅನುದಾನ: ಶಿಕ್ಷಕರ ಸಂಬಳಕ್ಕೆ ಅಡ್ಡಿ ಇಲ್ಲ, 3000 ಹುದ್ದೆಗಳು ರದ್ದು
ಬೆಂಗಳೂರು : ಖಾಸಗಿ ಕಾಲೇಜುಗಳ ಅನುದಾನದಲ್ಲಿ ಶೇ.15ರಷ್ಟು ಕಡಿತ ಮಾಡಿದ ನಿರ್ಧಾರ ಪ್ರತಿಭಟಿಸಿ ರಾಜ್ಯಾದ್ಯಂತ ಕಾಲೇಜು ಅಧ್ಯಾಪಕರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅನುದಾನ ಕಡಿತ ತೀರ್ಮಾನವನ್ನು ಪರಿಷ್ಕರಿಸಿದೆ. ಅನುದಾನಕ್ಕೆ ಹಾಕಿದ್ದ ಕತ್ತರಿಯನ್ನು , ಈಗಾಗಲೇ ಮಂಜೂರಾಗಿದ್ದ ಖಾಲಿ ಹುದ್ದೆಗಳತ್ತ ಹರಿಸಿದೆ.
ಶುಕ್ರವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ಈ ವಿಷಯವನ್ನು ಪ್ರಕಟಿಸಿದರು. ಅನುದಾನ ನೀತಿ ಮಾರ್ಪಾಡು ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಖಾಲಿ ಇರುವ 3000ಕ್ಕೂ ಹೆಚ್ಚು ಭೋದಕ - ಭೋದಕೇತರ ಹುದ್ದೇಗಳ ನೇಮಕಾತಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿರುವುದಾಗಿಯೂ ಹೇಳಿದ್ದಾರೆ.
ಖಾಲಿ ಹುದ್ದೆಗಳ ಭರ್ತಿ ಕಾರ್ಯ ಕೈಬಿಡುವ ಮೂಲಕ 30 ಕೋಟಿ ರುಪಾಯಿ ಉಳಿಸಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಸರಿಯಾಗಿ ಸಂಬಳ ಹಾಗೂ ಭತ್ಯೆ ನೀಡಲು ಅನುವಾಗುತ್ತದೆ ಎಂದೂ ಅವರು ಹೇಳಿದರು. 162 ಸಂಯುಕ್ತ ಪದವಿಪೂರ್ವ ಕಾಲೇಜುಗಳನ್ನು ಪದವಿ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು ಎಂದು ವಿಭಜಿಸಲಾಗುವುದು. ಸುಮಾರು 1400 ಸಿಬ್ಬಂದಿ ಪದವಿಪೂರ್ವ ಕಾಲೇಜಿಗೆ ವರ್ಗಾವಣೆ ಹೊಂದುವರು ಎಂದೂ ಅವರು ವಿವರಿಸಿದರು.
ಮುಷ್ಕರ ಮುಂದುವರಿಕೆ : ಈ ಪರಿಷ್ಕರಣೆಯಿಂದ ಮತ್ತಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ಕಾಲೇಜು ಅಧ್ಯಾಪಕರ ಸಂಘ ಪ್ರತಿಕ್ರಿಯೆ ನೀಡಿದೆ. ಏಕಪಕ್ಷೀಯವಾಗಿ ಕೈಗೊಂಡಿರುವ ಈ ನಿರ್ಧಾರದಿಂದ ಸರಕಾರ ಶಿಕ್ಷಕ ಸಮುದಾಯಕ್ಕೆ ಘೋರ ಅನ್ಯಾಯ ಎಸಗಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ರೇಷ್ಮೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಮುಷ್ಕರ ಮುಂದುವರಿಸುವುದಾಗಿಯೂ ಹೇಳಿದ್ದಾರೆ.
ಅನುದಾನ ನೀತಿ ಪರೀಕ್ಷರಣೆಯಿಂದ ಪದವಿ ಪೂರ್ವ ಕಾಲೇಜುಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಲಾಗಿದ್ದು, ಪದವಿಪೂರ್ವ ಕಾಲೇಜುಗಳ ಅಧ್ಯಾಪಕರು - ಉಪನ್ಯಾಸಕರ ಸ್ಥಾನಮಾನವನ್ನೇ ಕಳೆದುಕೊಳ್ಳುತ್ತಾರೆ ಎಂದೂ ಅವರು ಹೇಳಿದ್ದಾರೆ.