ಬೆಳಗಾವಿ ಬಂದ್, ಹಿಂಸೆ, ಲಾಠಿ ಪ್ರಹಾರ, 60 ಜನರ ಬಂಧನ
ಬೆಳಗಾವಿ: ತಮ್ಮ ಸಂಘಟನೆಯ ಕಾರ್ಯಕರ್ತನನ್ನು ಕೊಲೆ ಮಾಡಿದ ಆರೋಪಿಗಳನ್ನು ತತ್ಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ ಶುಕ್ರವಾರ ಕರೆ ನೀಡಿದ್ದ ಬೆಳಗಾವಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಕೆಲವೆಡೆ ಬಸ್ಗಳ ಮೇಲೆ ಕಲ್ಲು ತೂರಿದ ಘಟನೆಯನ್ನು ಹೊರತು ಪಡಿಸಿ ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು.
ಗುಂಪೊಂದು ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಇನ್ನಿತರ ವಾಹನಗಳ ಮೇಲೆ ಕಲ್ಲು ತೂರಿದಾಗ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಕಲ್ಲು ತೂರಾಟದಿಂದ ಬಸ್ಸು, ಕಾರು, ಟೆಂಪೋ ಸೇರಿದಂತೆ ಒಟ್ಟು 28 ವಾಹನಗಳು ಜಖಂಗೊಂಡಿವೆ, ಮಹಿಳೆಯಾಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲುತೂರಾಟ, ನಿಷೇಧಾಜ್ಞೆ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 60 ಜನರನ್ನು ಬಂಧಿಸಲಾಗಿದೆ. ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಗಾಂಧಿನಗರದಲ್ಲಿ ಗುಂಪೊಂದು ಬಲವಂತವಾಗಿ ಅಂಗಡಿ ಮುಚ್ಚಿಸುವ ಪ್ರಯತ್ನ ಮಾಡಿದಾಗ ಮಾತಿಗೆ ಮಾತು ಬೆಳೆದು ಘರ್ಷಣೆ ಆರಂಭವಾಯಿತು.
ಬೆಳಗಾವಿಯ ನ್ಯೂ ಗಾಂಧೀನಗರದ ಪಾನ್ ಶಾಪ್ ಒಂದರಲ್ಲಿ ಭಜರಂಗದಳದ ಕಾರ್ಯಕರ್ತ ಜ್ಯೋತಿಬಾ ಬಾಬು ರಾವ್ ಎಂಬ ಯುವಕನನ್ನು ಫೆ.19ರಂದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳನ್ನು ಬಂಧಿಸದಿರುವುದು ಭಜರಂಗ ದಳದ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಈ ಸಂಬಂಧ ದಳ ಬಂದ್ಗೆ ಕರೆ ನೀಡಿತ್ತು.