ನಿಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದಬನುಮಯ್ಯನವರಿಗೆ ನಮಸ್ಕಾರ
ಮೈಸೂರು : ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಶೈಕ್ಷಣಿಕ ಕೇಂದ್ರ. ಮೈಸೂರಿನ ಶಿಕ್ಷಣ ಸಂಸ್ಥೆಗಳು ಹಾಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಇತಿಹಾಸ ಇದೆ. ವೈಶಿಷ್ಟ್ಯ ಇದೆ. ಮನ್ನಣೆಯೂ ಇದೆ. ಮೈಸೂರಿನ ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಡಿ. ಬನುಮಯ್ಯ ಕಾಲೇಜು, ಮರಿಮಲ್ಲಪ್ಪ ವಿದ್ಯಾಸಂಸ್ಥೆಗಳು ವಿಶ್ವಾದ್ಯಂತ ಖ್ಯಾತಿಗಳಿಸಿವೆ.
ಈ ಪ್ರಸಿದ್ಧ ಕಾಲೇಜುಗಳ ಪಟ್ಟಿಯಲ್ಲಿರುವ ಡಿ. ಬನುಮಯ್ಯ ಕಾಲೇಜಿಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಡಿ. ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವದ ಹೊಸ್ತಿಲಲ್ಲಿದ್ದರೆ, 1949ರಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿ ಆರಂಭವಾದ ಸಂಸ್ಥೆಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು 50 ವರ್ಷ ಪೂರೈಸಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಒಂದು ವರ್ಷದಿಂದಲೂ ಇಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ನಡೆದಿವೆ. ಫೆ.24ರ ಶನಿವಾರ , ವರ್ಷವಿಡೀ ನಡೆದ ಕಾರ್ಯಕ್ರಮಗಳ ಸಮಾರೋಪ. ಕಾರ್ಯಕ್ರಮದ ಅಂಗವಾಗಿ ಕಳೆದ ಮೂರು ದಿನಗಳಿಂದ ಸಂಗೀತೋತ್ಸವವೂ ನಡೆಯುತ್ತಿದೆ.
ಸಂಸ್ಥೆಯ ಹಿರಿಮೆ - ಗರಿಮೆ : ಡಿ. ಬನುಮಯ್ಯನವರು ಮೈಸೂರು ಅರಮನೆ ಬಳಿಯೇ ಇರುವ ವರ್ತಕರ ಪೇಟೆಯ ಪ್ರಸಿದ್ಧ ವ್ಯಾಪಾರಿಗಳು. ಕಲಾ ಪೋಷಕರು, ವಿದ್ವಾನ್ ಕೆ. ವಾಸುದೇವಾಚಾರ್ ಅವರಂತಹ ಮಹಾನ್ ಕಲಾವಿದರನ್ನು ಪುರಸ್ಕರಿಸಿದವರು. ಎಲ್ಲಕ್ಕಿಂತ ಮಿಗಿಲಾಗಿ ನಾಲ್ವಡಿ ಕೃಷ್ಣರಾಜ ಒಡೆಯರ ಆಪ್ತ ಗೆಳೆಯರಾಗಿದ್ದ ಬನುಮಯ್ಯನವರು 19 ವರ್ಷಗಳ ಕಾಲ ವರ್ತಕರನ್ನು ಪ್ರತಿನಿಧಿಸಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದವರು.
ನಹೀ ಜ್ಞಾನೇನ ಸದೃಶಂ ಎಂಬುದನ್ನು ಅರಿತಿದ್ದ ಬನುಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಪದಾರ್ಪಣ ಮಾಡಿದರು. ವಿದ್ಯಾಸಂಸ್ಥೆ ಕಟ್ಟಿದರು. ಇವರು ಸದಸ್ಯರಾಗಿದ್ದ ಸದ್ವಿದ್ಯಾ ಶಾಲೆಗೆ ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದರೂ ಭೇಟಿ ನೀಡಿದ್ದರು. ಬನುಮಯ್ಯನವರು ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಸಾಹಿತ್ಯವನ್ನೂ ಪೋಷಿಸಿದರು. ಸರ್.ಎಂ. ವಿಶ್ವೇಶ್ವರಯ್ಯ, ಕುವೆಂಪು ಮೊದಲಾದ ಮಹಾನ್ ಗಣ್ಯರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಇಂದು ಮುಗಿಲಿನೆತ್ತರಕ್ಕೆ ಬೆಳೆದಿದೆ.
ಡಿ. ಬನುಮಯ್ಯ ಶಾಲೆಗೆ ಇದುವೇ ಸೋಪಾನ. ಈ ಶಾಲೆಯಲ್ಲಿ ನಾ. ಕಸ್ತೂರಿ, ಪಂಡಿತ್ ರಾಜೀವ್ ತಾರಾನಾಥ್, ಮೊದಲಾದ ಮಾಹಾನ್ ಗಣ್ಯರು ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಯೂ, ವಿದ್ಯಾವಂತರನ್ನಾಗಿಯೂ ಸಿದ್ಧಗೊಳಿಸಿದ್ದಾರೆ. ತಮ್ಮ ತಾತ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನೇ ಅವರ ಮೊಮ್ಮಗ ಬಿ.ವಿ. ಬನುಮಯ್ಯ ಮುಂದುವರಿಸಿದರು. 25 ವರ್ಷಗಳ ಕಾಲ ಸರಸ್ವತಿಯ ಸೇವೆ ಮಾಡಿದರು.
ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತಾವು ಡಿ. ಬನುಮಯ್ಯ ಶಾಲೆಯ ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ.