ಬಿರು ಬಿಸಿಲು ಬೀರುತ್ತಿರುವ ಸೂರ್ಯದೇವ
ಬೆಂಗಳೂರು : ಶಿವರಾತ್ರಿಯೂ ಕಳೆಯಿತು. ಚಳಿಯೂ ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋಯಿತು. ಇನ್ನು ಮುಂದಿನದೆಲ್ಲಾ ಉರಿ ಬಿಸಿಲ ಬಿಸಿ ಬಿಸಿ ಮಾತೇ. ರಾಜ್ಯದಲ್ಲಿ ಧಾರಾಳವಾಗಿ ಬಿಸಿಲೇರುತ್ತಿದೆ. ಎಲ್ಲೆಲ್ಲೂ ಒಣಹವೆ. ಫ್ಯಾನ್ ಸ್ವಿಚ್ ಅದುಮದೇ ಮಲಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.
ರಾಜ್ಯದ ಅತಿ ಕನಿಷ್ಠ ಉಷ್ಣಾಂಶವೇ 17.2 ಡಿಗ್ರಿ ಸೆಲ್ಸಿಯಸ್ ಎಂದರೆ ಏರುತ್ತಿರುವ ಬಿಸಿಲಿನ ಬದುಕು ಕಂಡೀತು. ಸೂರ್ಯದೇವನು ತನ್ನ ಒಂಟಿ ಚಕ್ರದ ರಥದಲ್ಲಿ ಬಿರಬಿರನೇ ಸಾಗುತ್ತಾ, ಬಿರು ಬಿಸಿಲನ್ನು ಬೀರುತ್ತಿದ್ದಾನೆ. ಹೀಗಾಗಿ ಕನಿಷ್ಠ ತಾಪಮಾನದ ಜತೆಗೆ, ಗರಿಷ್ಠ ತಾಪಮಾನವೂ ಏರುತ್ತಿದೆ. ಬೆಂಗಳೂರಿನಲ್ಲಿಯೇ ನಿನ್ನೆ 34 ಡಿಗ್ರಿ ದಾಖಲಾಗಿತ್ತು.
ಉತ್ತರ ಒಳನಾಡಿನ ಬಹುತೇಕ ಎಲ್ಲೆಡೆ ಕನಿಷ್ಠ ತಾಪಮಾನದಲ್ಲೂ ಏರಿಕೆ ಆಗಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಾತ್ರ ಅಲ್ಪ ಬದಲಾವಣೆ ಕಂಡುಬಂದಿದೆ. ಬೆಂಗಳೂರಿನಲ್ಲಿರುವ ರಾಜ್ಯ ಹವಾಮಾನ ವೀಕ್ಷಣಾಲಯ ನೀಡಿರುವ ಮುನ್ಸೂಚನೆಯಂತೆ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ.
ಸ್ಥಳೀಯ ಹವಾಮಾನ ಮುನ್ಸೂಚನೆಯ ಪ್ರಕಾರ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.