ಎರಡೂವರೆ ವರ್ಷದಿಂದ ಆಹಾರ ಸೇವಿಸದೆಬದುಕಿರುವ ಯುವತಿ!
ಬೀದರ್ : ಈ ಹುಡುಗಿಯ ಹೆಸರು ಜಗದಾಂಬಾ. ವಯಸ್ಸು 17. ಊರು: ಬೀದರ್ ತಾಲೂಕಿನ ಮಲ್ಕಾಪೂರ. ಕಾಮರ್ಸ್ ಕಾಲೇಜಿನಲ್ಲಿ ಪಿ.ಯು.ಸಿ ಓದ್ತಾ ಇದ್ದಾಳೆ. ಇದರಲ್ಲೇನು ವಿಶೇಷ ಎಂದಿರಾ? ಇದೆ. ಈಕೆ ನಿರಾಹಾರಿ. ಈ ಹುಡುಗಿ ಹೊಟ್ಟೆಗೆ ತಿಂದು ಎರಡೂವರೆ ವರ್ಷವೇ ಆಯಿತಂತೆ. ಈಕೆ ದಿನಕ್ಕೆ ಕೇವಲ ಒಂದೆರಡು ಲೋಟ ನೀರು ಮಾತ್ರ ಕುಡಿಯುತ್ತಾಳೆ. ಆದರೂ ಬದುಕಿದ್ದಾಳೆ.
ಕೇವಲ ಬದುಕಿದ್ದಾಳಷ್ಟೇ ಅಲ್ಲ. ಎಲ್ಲ ಹುಡಿಗಿಯರ ಹಾಗೆ, ನಗುತ್ತಾ ನಲಿಯುತ್ತಾ, ಆಡುತ್ತಾ, ಕುಣಿಯುತ್ತಾ ಓಡಾಡಿಕೊಂಡಿದ್ದಾಳೆ. ಲವಲವಿಕೆಯಿಂದಿದ್ದಾಳೆ, ಕಾಲೇಜಿಗೂ ಹೋಕ್ತಾಳೆ, ಮನೆ ಕೆಲಸವನ್ನೂ ಮಾಡ್ತಾಳೆ, ಆದ್ರೆ, ವಯಸ್ಸಿಗೆ ಸಹಜವಾದ ಬೆಳವಣಿಗೆ ಇಲ್ಲ ಅಷ್ಟೇ. ಆದ್ರೂ ಊಟ - ತಿಂಡಿಯೇ ಮಾಡದ ಈಕೆ ಪವಾಡ ಸದೃಶವಾಗಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿದ್ದಾಳೆ.
ಈ ಸುದ್ದಿ ಕಳೆದ ಮೂರು ನಾಲ್ಕು ದಿನದಿಂದ ಕರ್ನಾಟಕಾದ್ಯಂತ ಭಾರಿ ಸುದ್ದಿ ಮಾಡಿದೆ. ಊಟ ಮಾಡದೇ, ತಿಂಡಿ ತಿನ್ನದೆ, ಹಣ್ಣು ಹಂಪಲನ್ನೂ ಸೇವಿಸದೆ, ಕೇವಲ ನೀರು ಮಾತ್ರ ಕುಡಿದು ಬದುಕಿರುವ ವಿಚಿತ್ರ ಯುವತಿಯ ಬಗ್ಗೆ ಪತ್ರಿಕೆಯಾಂದು ಬರೆದಾಗ ನಾವು ನಕ್ಕು ಸುಮ್ಮನಾಗಿದ್ದೆವು. ಕೆಲವೇ ತಿಂಗಳ ಹಿಂದೆ ಬಾಲಕಿಯಾಬ್ಬಳು ತನ್ನ ಕಣ್ಣಿನಲ್ಲಿ ಕಲ್ಲು ಬೀಳುತ್ತದೆ ಎಂದು ಭಾರಿ ಸುದ್ದಿ ಮಾಡಿ, ಆನಂತರ ಅದು ನಾಟಕ ಎಂದು ಬಯಲಾದಂತೆಯೇ ಇದೂ ಕೂಡ ಎಂದು ಭಾವಿಸಿದೆವು.
ಆದರೆ, ಕರ್ನಾಟಕದ ಎಲ್ಲ ಮಾಧ್ಯಮ ಪ್ರತಿನಿಧಿಗಳೂ ಈಗ ಜಗದಾಂಬಳ ನಿರಾಹಾರ ಕತೆಯನ್ನು ಸೊಗಸಾಗಿ ವರ್ಣಿಸುತ್ತಿವೆ. ಟಿ.ವಿ. ಚಾನೆಲ್ಗಳು ಆಕೆಯ ಸಂದರ್ಶನವನ್ನೂ ಮಾಡಿವೆ. ಜಗದಾಂಬಳ ತಾಯಿಯ ರೀತ್ಯ. ಈ ಯುವತಿ ಊಟ ಮಾಡಿ ಹತ್ತಿರ ಹತ್ತಿರ ಮೂರು ವರ್ಷವೇ ಆಯಿತಂತೆ.
ನಾಟಿ ಔಷಧಿ, ಇಂಗ್ಲಿಷ್ ಔಷಧಿ ಎಲ್ಲ ಕೊಡಿಸಿ ಆಗಿದೆ. ಆದರೂ ಪ್ರಯೋಜನ ಆಗಿಲ್ಲ. ಔಷಧಿ ಕುಡಿದರೂ ಈಕೆ ವಾಂತಿ ಮಾಡ್ತಾಳಂತೆ. ಯಾರೋ ಮಾಟ ಮಾಡಿಸಿರಬೇಕು ಅಂತ, ಇವರೂ ಮಾಟ, ಮಂತ್ರ, ತಂತ್ರ ಎಲ್ಲ ಮಾಡಿಸಿದರಂತೆ ಆದರೂ ಯಾವ ಪ್ರಯೋಜನನೂ ಆಗಿಲ್ಲ.
ಜಗದಾಂಬಾ ಏನು ಹೇಳ್ತಾಳೆ ಗೊತ್ತೆ? : ‘ನಾನು ಎಲ್ಲರಿಗೂ ಅಡಿಗೆ ಮಾಡಿ ಊಟ ಬಡಿಸ್ತೀನಿ. ಆದರೆ, ನಾನು ಏನಾದ್ರೂ ತಿಂದ್ರೆ ವಾಂತಿ ಆಗತ್ತೆ, ಅದಕ್ಕೇ ತಿನ್ನೋದೇ ಬಿಟ್ಟು ಬಿಟ್ಟಿದ್ದೀನಿ. ದಿನಕ್ಕೆ ಒಂದೆರಡು ಗ್ಲಾಸು ನೀರು ಮಾತ್ರ ಕುಡೀತೀನಿ. ನೀರು ಕುಡಿದ್ರೆ ವಾಂತಿ ಆಗಲ್ಲ ಅಂತಾಳೆ. 98ರಲ್ಲಿ ನನಗೆ ಹೀಗಾಯಿತು. ಏನಾದರೂ ತಿಂದರೆ, ವಾಂತಿ ಆಗ್ತಾ ಇತ್ತು. ಹೀಗಾಗಿ ತಿನ್ನೋದನ್ನೇ ಕಾಲಕ್ರಮೇಣ ಬಿಟ್ಟು ಬಿಟ್ಟೆ, ಈಗ ನನಗೆ ತಿನ್ನಬೇಕು ಅಂತ ಅನ್ಸೋದೆ ಇಲ್ಲ. ನನಗೆ ಊಟ ಕಂಡ್ರೇ ಅಲರ್ಜಿ’.
ಇದು ಸಾಧ್ಯವೇ?: ತಜ್ಞ ವೈದ್ಯರ ಪ್ರಕಾರ ದಿನಕ್ಕೆ ಕೇವಲ 2 ಲೋಟ ನೀರು ಕುಡಿದು ಬದುಕಲು ಸಾಧ್ಯವೇ ಇಲ್ಲ. ಈಕೆಯನ್ನು ಕೂಲಂಕಷ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ, ಸತ್ಯ ಹೊರಗೆ ಬರುತ್ತದೆ ಎನ್ನುತ್ತಾರೆ.
ನಂಬಿದರೆ, ನಂಬಿ ಬಿಟ್ಟರೆ ಬಿಡಿ, ನಮ್ಮ ಹುಡುಗಿ ಎರಡೂವರೆ ವರ್ಷದಿಂದ ಊಟ ಮಾಡದೇ ಬದುಕಿರೋದು ಸತ್ಯ ಎನ್ನುವುದು ಜಗದಾಂಬೆಯ ತಾಯಿ ಮಲ್ಲಮ್ಮನ ನುಡಿ. ಜಗದಾಂಬಳ ಜತೆ ಕಾಲೇಜಿನಲ್ಲಿ ಓದುತ್ತಿರುವ ಕೆಲವು ಹುಡುಗಿಯರೂ ಇದನ್ನು ಬೆಂಬಲಿಸುತ್ತಾರೆ. ಮಲ್ಕಾಪೂರಕ್ಕೆ ಭೇಟಿ ನೀಡಿ ಹುಡುಗಿಯನ್ನು ಸಂದರ್ಶಿಸಿರುವ ಪತ್ರಕರ್ತರೂ ಇದನ್ನೇ ಹೇಳುತ್ತಾರೆ. ಕಾದು ನೋಡೋಣ. ಇನ್ನೊಂದೆರಡು ದಿನದಲ್ಲಿ ಸತ್ಯ ಗೊತ್ತಾಗೇ ಗೊತ್ತಾಗತ್ತೆ!
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...