ಫೆ 25: ಮೊೖಲಿ ಅವರ ರಾಮಾಯಣ ಮಹಾನ್ವೇಶಣಂ ಕೃತಿ ಬಿಡುಗಡೆ
ಬೆಂಗಳೂರು : ಸಾಹಿತಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ಶ್ರೀ ರಾಮಾಯಣ ಮಹಾನ್ವೇಶಣಂ ಕೃತಿಯ ಮೊದಲ ಸಂಪುಟ ಫೆಬ್ರವರಿ 25ರಂದು ಬಿಡುಗಡೆಯಾಗಲಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೊಯಿಲಿ ಅವರು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದು, ಸಮಾರಂಭವು ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ ಎಂದರು. ಶ್ರೀ ರಾಮಾಯಣ ಮಹಾನ್ವೇಶಣಂ ಕೃತಿಯ ಮೊದಲ ಸಂಪುಟ 500 ಪುಟಗಳನ್ನು ಹೊಂದಿದ್ದು, 45 ಅಧ್ಯಾಯಗಳಿವೆ. ಇನ್ನೂ ಐದು ಸಂಪುಟಗಳನ್ನು ಸದ್ಯದಲ್ಲಿಯೇ ಹೊರತರಲಾಗುವುದು. ಪ್ರಸ್ತುತ ಕೃತಿ ವಿವಿಧ ದೇಶಗಳ ಸುಮಾರು 160 ರಾಮಾಯಣಗಳನ್ನು ಅಧ್ಯಯನ ಮಾಡಿದ ನಂತರ ಬರೆದಿರುವಂತಹುದು ಎಂದು ಮೊಯಿಲಿ ಪುಸ್ತಕದ ಬಗ್ಗೆ ವಿವರಿಸಿದರು.
ಕೃತಿಯಲ್ಲಿ ಲಕ್ಷ್ಮಣ ನಾಯಕನಾಗಿರುತ್ತಾನೆ. ಸುಮೇಧ, ಕಾಳಿಕಾಚಾರ್ಯ, ವನಜ, ಮುಂತಾದ ಹೊಸ ಪಾತ್ರಗಳನ್ನು ಪರಿಚಯಿಸಲಾಗಿದೆ ಎಂದು ವೀರಪ್ಪ ಮೊಯಿಲಿ ಅವರು ತಮ್ಮ ಕೃತಿಯ ಬಗ್ಗೆ ವಿವರಿಸಿದರು. ಕೃತಿಯು ಮಹಾ ಛಂದಸ್ಸು ಮತ್ತು ಪುಷ್ಪ ರಗಳೆಯಲ್ಲಿದೆ. ಆದರೆ ಸರಳ ಕನ್ನಡದಲ್ಲಿ ಬರೆದಿರುವುದರಿಂದ ಓದುಗರಿಗೆ ತೊಂದರೆಯಾಗಲಾರದು ಎಂದು ಅವರು ಅಭಿಪ್ರಾಯ ಪಟ್ಟರು.
ಮೊಯಿಲಿ ಅವರ ಕೊಟ್ಟ ಕಾದಂಬರಿ ಎರಡನೇ ಮುದ್ರಣಕ್ಕೆ ಸಿದ್ಧವಾಗಿದೆ. ಶ್ರೀ ರಾಮಾಯಣ ಮಹಾನ್ವೇಶಣಂ ಕೃತಿಯನ್ನು ಸಂಸ್ಕೃತ ಮತ್ತು ಹಿಂದಿಗೆ ಅನುವಾದಿಸಿ ಪ್ರಕಟಿಸುವ ಯೋಜನೆಯೂ ಇದೆ ಎಂದು ಮೊಯಿಲಿ ಹೇಳಿದರು.
(ಇನ್ಫೋ ವಾರ್ತೆ)