ಬಾರ್ಜ್ ಮೌಂಟೆಡ್ : ಅನಿರ್ದಾಷ್ಟವಧಿಮುಷ್ಕರ ಪ್ರಾರಂಭ
(ಮಂಗಳೂರು ಪ್ರತಿನಿಧಿಯಿಂದ)
ಮಂಗಳೂರು : ಸ್ಥಳೀಯರ ತೀವ್ರ ವಿರೋಧದ ನಡುವೆ ತಣ್ಣೀರುಬಾವಿಯಲ್ಲಿ ಸ್ಥಾಪನೆಯಾಗುತ್ತಿರುವ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರದ ವಿರುದ್ಧ ಸೋಮವಾರದಿಂದ ಅನಿರ್ದಿಷ್ಟ ಮುಷ್ಕರ ಪ್ರಾರಂಭವಾಗಿದೆ.
ಬಾರ್ಜ್ ಮೌಂಟೆಡ್ ಸ್ಥಾವರ ಅಸ್ತಿತ್ವಕ್ಕೆ ಬರುತ್ತಿರುವ ಪ್ರದೇಶಗಳ ಸಂತ್ರಸ್ತರು ಮತ್ತು ತಣ್ಣೀರುಬಾವಿ ಹೋರಾಟ ಸಮಿತಿಯ ಮಂದಿ ಇಂದು ಸ್ಥಾವರದ ಎದುರು ಪ್ರತಿಭಟನೆ ನಡೆಸಿದರು. ತತ್ಪರಿಣಾಮ ಸ್ಥಾವರದ ಕಾಮಗಾರಿಗೆ ಅಡ್ಡಿ ಉಂಟಾಗಿದೆ.
ಕುದ್ರೋಳಿ, ಬೆಂಗ್ರೆ, ಬೋಳೂರು ಹಾಗೂ ಬೊಕ್ಕಪಟ್ಣದ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಮುದ್ರಕ್ಕೆ ಬಿಸಿನೀರು ಬಿಡಕೂಡದು, ಸಂತ್ರಸ್ತರಿಗೆ ಪುನರ್ ವಸತಿ ಒದಗಿಸಬೇಕು. ಈ ಬಗ್ಗೆ ಲಿಖಿತ ಭರವಸೆ ಕೊಟ್ಟಲ್ಲಿ ಪ್ರತಿಭಟನೆ ನಿಲ್ಲಿಸುತ್ತೇವೆ, ಇಲ್ಲವಾದರೆ ಹೋರಾಟ ನಿಲ್ಲದು ಎಂಬುದು ಪ್ರತಿಭಟನಾಕಾರರ ಪಟ್ಟು. ಫೆಲಿಕ್ಸ್ ಡಿಸೋಜ, ರಾಮಚಂದ್ರ ಬೈಕಂಪಾಡಿ ಹಾಗೂ ದಾಮೋದರ ಸುವರ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನೂರು ಕೋಟಿ ರುಪಾಯಿ ಅಂದಾಜು ವೆಚ್ಚದ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರದ ಕಾಮಗಾರಿಗಳು ಈವರೆಗೆ ರಹಸ್ಯವಾಗಿ ನಡೆದಿವೆ. ಸಂಸ್ಥೆಯ ಉದ್ಯೋಗಕ್ಕೆ ಸ್ಥಳೀಯರನ್ನು ನೇಮಿಸಿಕೊಳ್ಳದಿರುವುದು ಜನರನ್ನು ಕೆರಳಿಸಿದೆ. ಈ ನಡುವೆ 2 ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದಾಗ ತಣ್ಣೀರುಬಾವಿ ಪವರ್ ಕಂಪನಿ ಎಂದು ಇದ್ದ ಹೆಸರನ್ನು ಈಗ ಜಿಎಂಆರ್ ಪವರ್ ಕಂಪನಿ ಎಂದು ಬದಲಾಯಿಸಿದೆ. ಹೆಸರು ಬದಲಾಯಿಸುವ ಮೂಲಕ ಸಂತ್ರಸ್ತರಿಗೆ ಪರಿಹಾರ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಂಪನಿ ಯತ್ನಿಸುತ್ತಿದೆ ಎಂಬ ಸಂಶಯ ಸ್ಥಳೀಯರದ್ದು.