ರಾಜ್ಯದ ರೇಷ್ಮೆ ಯೋಜನೆಗೆ ಜಪಾನ್ನಿಂದ ಸಾವಿರ ಕೋಟಿ ನೆರವು
ಸಿಎನ್ನಾರ್ ವಿಜಯಕುಮಾರ್
ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ಅತ್ಯುಚ್ಛ ಗುಣಮಟ್ಟದ 15 ಸಾವಿರ ಟನ್ ಕಚ್ಚಾ ರೇಷ್ಮೆಯನ್ನು ಉತ್ಪಾದಿಸುವ ರಾಜ್ಯದ ಯೋಜನೆಗೆ ಒಂದು ಸಾವಿರ ಕೋಟಿ ರುಪಾಯಿಗಳನ್ನು ಒದಗಿಸಲು ಜಪಾನ್ ಮುಂದೆ ಬಂದಿದೆ.
ಜಪಾನಿನ ಅಂತರರಾಷ್ಟ್ರೀಯ ವಾಣಿಜ್ಯ ಬ್ಯಾಂಕ್, ರಾಜ್ಯದ ಈ ಯೋಜನೆಯಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿರುವುದಾಗಿ ಕೇಂದ್ರ ಜವಳಿ ಖಾತೆ ಸಚಿವಾಲಯ ರಾಜ್ಯಕ್ಕೆ ಪತ್ರ ಬರೆದಿದೆ ಎಂದು ಕರ್ನಾಟಕ ಸಿರಿಕಲ್ಚರ್ ಕಮೀಷನರ್ ವಿ. ಉಮೇಶ್ ಯುಎನ್ಐ ಪ್ರತಿನಿಧಿಗೆ ತಿಳಿಸಿದ್ದಾರೆ. ಮುಂದಿನ ಎರಡು ಮೂರು ತಿಂಗಳಲ್ಲಿ 500 ಕೋಟಿ ರುಪಾಯಿಗಳು ಜಪಾನಿನಿಂದ ರಾಜ್ಯಕ್ಕೆ ಹರಿದುಬರಬಹುದೆಂದು ಅವರು ಹೇಳಿದ್ದಾರೆ.
ಕೇಂದ್ರ ಕೃಷಿ ಮಂಡಳಿಯಾಂದಿಗೆ ರಾಜ್ಯ ಸರ್ಕಾರ ಈಗಾಗಲೇ ಸಮಗ್ರ ರೇಷ್ಮೆ ಅಭಿವೃದ್ಧಿ ಯೋಜನೆಯಾಂದನ್ನು 500 ಕೋಟಿ ರು. ಅಂದಾಜಿನಲ್ಲಿ ರೂಪಿಸಿದ್ದು , ಈ ಯೋಜನೆಯನ್ನು ರೇಷ್ಮೆ ಸಂಪತ್ತು ಎಂದು ಹೆಸರಿಸಲಾಗಿದೆ. ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಶೇ. 65 ರಷ್ಟು ಪಾಲನ್ನು ಹೊಂದಿರುವ ಕರ್ನಾಟಕ, ದೇಶದಲ್ಲಿ ರೇಷ್ಮೆ ಉತ್ಪಾದನೆಯ ದೊಡ್ಡಣ್ಣ ಎನಿಸಿದೆ. ಪ್ರಸ್ತುತ ದೇಶದಲ್ಲಿ 14, 018 ಟನ್ ರೇಷ್ಮೆ ಉತ್ಪಾದನೆಯಾಗುತ್ತಿದೆ.
ಜಪಾನಿ ನೆರವಿನ ಯೋಜನೆಯನ್ನು ಪ್ರಸಕ್ತ ವರ್ಷವೇ ಕೇಂದ್ರ ರೇಷ್ಮೆ ಮಂಡಳಿಯಾಂದಿಗೆ ಕೈಗೆತ್ತಿಕೊಂಡಿದ್ದು , ತುಂತುರು ನೀರಾವರಿ ಹಾಗೂ ರೇಷ್ಮೆ ಉತ್ಪಾದನೆ ಪರಿಸರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ದೊಡ್ಡ ದೊಡ್ಡ ರೇಷ್ಮೆಗೂಡು ಮಾರುಕಟ್ಟೆಗಳ ನಿರ್ಮಾಣದಂಥದ ದೊಡ್ಡ ಕಾಮಗಾರಿಗಳನ್ನು ಮುಂದಿನ ವರ್ಷದಿಂದ ಕೈಗೊಳ್ಳಲಾಗುವುದು. ಅದೇರೀತಿ ಸಿಲ್ಕ್ ಫಿಲೇಚರ್ ಹಾಗೂ ರೇಷ್ಮೆ ತಳಿ ಕುರಿತ ಅಭಿವೃದ್ಧಿ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುವುದು.
ಪ್ರಸ್ತುತ 1 ಲಕ್ಷ 20 ಸಾವಿರ ಹೆಕ್ಟೇರ್ ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ ಕೈಗೊಳ್ಳಲಾಗಿದ್ದು , ಈ ಚಟುವಟಿಕೆಯನ್ನು ಮತ್ತೂ 35 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ವರ್ಷ 250 ಟನ್ ಬೈವೋಲ್ಟಿನ್ ರೇಷ್ಮೆಯನ್ನು ರಾಜ್ಯದಲ್ಲಿ ಉತ್ಪಾದಿಸಲಾಗಿದ್ದು , ಈ ಪ್ರಮಾಣವನ್ನು ನಂತರದ ಸಾಲಿನಲ್ಲಿ ದ್ವಿಗುಣಗೊಳಿಸಲು ಉದ್ದೇಶಿಸಲಾಗಿದೆ. ಅಂತೆಯೇ ಅಂತರರಾಷ್ಟ್ರೀಯ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲೂ ಉದ್ದೇಶಿಸಲಾಗಿದೆ.
(ಯುಎನ್ಐ)