ವೀರಪ್ಪನ್ ಬಲಗೈ ಭಂಟ ಸೇತುಕುಳಿ ಗೋವಿಂದನ್ ಬಂಧನ
ಕೊಯಮತ್ತೂರು : ವೀರಪ್ಪನ್ ಶಿಕಾರಿಯಲ್ಲಿ ತೊಡಗಿರುವ ಉಭಯ ರಾಜ್ಯಗಳ ಪೊಲೀಸ್ ಪಡೆ ಶುಕ್ರವಾರ ಯಶಸ್ಸಿನ ಮತ್ತೊಂದು ಮೈಲುಗಲ್ಲನ್ನು ಮುಟ್ಟಿದ್ದು , ವೀರಪ್ಪನ್ ಬಲಗೈ ಭಂಟ ಎಂದು ಹೆಸರಾದ ಸೇತುಕುಳಿ ಗೋವಿಂದನ್ನನ್ನು ಬಂಧಿಸಿದೆ.
ತಮಿಳುನಾಡು- ಕೇರಳ ವಲಯದ ಸಿರುವಾಣಿ ಅರಣ್ಯ ಪ್ರದೇಶದಲ್ಲಿ ಸೇತುಕುಳಿ ಗೋವಿಂದನ್ ಎಸ್ಟಿಎಫ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾರ್ಯಾಚರಣೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ವಿಶೇಷ ಕಾರ್ಯಪಡೆಯ ಪೊಲೀಸರು ಭಾಗವಹಿಸಿದ್ದರೆಂದು ನಮ್ಮ ಕೊಯಮತ್ತೂರಿನ ಬಾತ್ಮೀದಾರರು ವರದಿ ಮಾಡಿದ್ದಾರೆ.
ಗುರುವಾರವಷ್ಟೇ ರಾಜ್ ಅಪಹರಣದ ನೀಲನಕ್ಷೆ ತಯಾರಿಸಿದ ಕುಖ್ಯಾತ ತಮಿಳು ಉಗ್ರ ಮಾರನ್ ಬಂಧನದ ಖುಷಿಯಲ್ಲಿದ್ದ ಎಸ್ಟಿಎಫ್ಗೆ ಈ ಯಶಸ್ಸು ಮತ್ತಷ್ಟು ಹುಮ್ಮಸ್ಸು ತಂದಿದೆ. ಇದರಿಂದಾಗಿ ವೀರಪ್ಪನ್ ಕೂಡ ಶೀಘ್ರದಲ್ಲೇ ಪೊಲೀಸರ ಬಲೆಗೆ ಸಿಕ್ಕಿ ಬೀಳುವ ಬಗೆಗಿನ ನಿರೀಕ್ಷೆಗಳು ಹೆಚ್ಚಿವೆ.
ಮಾರನ್ ನ್ಯಾಯಾಂಗ ವಶಕ್ಕೆ : ಈ ನಡುವೆ ಗುರುವಾರ ಎಸ್ಟಿಎಫ್ ಪೊಲೀಸರು ಬಂಧಿಸಿದ್ದ ಮಾರನ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು , 15 ದಿನಗಳ ಕಾಲ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಚೆನ್ನೈ ವರದಿಗಳು ತಿಳಿಸಿವೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ