ಭೂಕಂಪ ಸಂತ್ರಸ್ತರಿಗೆ ರಾಜ್ಯ ರೆಡ್ಕ್ರಾಸ್ ಸೊಸೈಟಿಯಿಂದ 13 ಲಕ್ಷ
ಬೆಂಗಳೂರು : ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಕರ್ನಾಟಕ ಘಟಕ ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗಾಗಿ ಶುಕ್ರವಾರ 13 ಲಕ್ಷ ರುಪಾಯಿಗಳ ಚೆಕ್ ಕಳುಹಿಸಿದೆ. ಇದು ರಾಜ್ಯ ರೆಡ್ಕ್ರಾಸ್ ಘಟಕ ಸಂತ್ರಸ್ತರ ನೆರವಿಗೆ ಒದಗಿಸುತ್ತಿರುವ ನೆರವಿನ ಮೂರನೇ ಕಂತು.
ಈ ಮುನ್ನ ಜನವರಿ 29 ರಂದು 2.5 ಲಕ್ಷ ರುಪಾಯಿ ಹಾಗೂ ಫೆ. 6 ರಂದು 13 ಲಕ್ಷ ರುಪಾಯಿಗಳ ನೆರವನ್ನು ಸಂತ್ರಸ್ತರ ನೆರವಿಗೆ ರೆಡ್ಕ್ರಾಸ್ ರಾಜ್ಯ ಘಟಕ ಒದಗಿಸಿತ್ತು ಎಂದು ಸೊಸೈಟಿಯ ಉಪಾಧ್ಯಕ್ಷ ಡಿ.ಎಂ. ನಂಜುಂಡಪ್ಪ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂತ್ರಸ್ತರ ನೆರವಿಗೆ ರಾಜ್ಯ ಘಟಕ ಒಟ್ಟು 50 ಲಕ್ಷ ರುಪಾಯಿ ನೆರವನ್ನು ಸಲ್ಲಿಸುವ ಗುರಿ ಹೊಂದಿದೆ ಎಂದೂ ಪ್ರಕಟಣೆ ತಿಳಿಸಿದೆ.
ಹಣ ರೂಪದ ಸಹಾಯ ಮಾತ್ರವಲ್ಲದೆ, ದಕ್ಷಿಣ ರೈಲ್ವೆಯ ಮೂಲಕ ಒಂದು ವ್ಯಾಗನ್ ಲೋಡ್ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರ ನೆರವಿಗೆ ಕಳುಹಿಸಲಾಗಿದೆ. ಈ ಸಾಮಗ್ರಿಗಳಲ್ಲಿ ಅಕ್ಕಿ, ಗೋಧಿ, ಮೈದಾ, ಔಷಧಿ, ಟೆಂಟ್ಸ್, ಬ್ಲಾಂಕೆಟ್ಸ್, ಬ್ರೆಡ್, ಬಿಸ್ಕತ್ತು ಹಾಗೂ ಖಾದ್ಯ ತೈಲ ಸೇರಿವೆ.
(ಯುಎನ್ಐ)
ಮುಖಪುಟ |