ಸಂಗೊಳ್ಳಿ ರಾಯಣ್ಣನ ವೀರಭೂಮಿ ನಂದಗಢದಲ್ಲಿ ಲಕ್ಷ್ಮೀ ಉತ್ಸವ
ಬೆಳಗಾವಿ : ಕನ್ನಡದ ಕಲಿ ಸಂಗೊಳ್ಳಿ ರಾಯಣ್ಣನ ಗಲ್ಲು ಗಂಭಕ್ಕೇರಿಸಿದ ಗಂಡು ಮೆಟ್ಟಿನ ಭೂಮಿ ನಂದಗಢ (ಬೆಳಗಾವಿ ಜಿಲ್ಲೆ) ದಲ್ಲಿ 22 ವರ್ಷಗಳ ನಂತರ ಗ್ರಾಮದೇವತೆ ಲಕ್ಷ್ಮೀದೇವಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಗ್ರಾಮದ ಮನೆಮನೆಗಳಿಗೆ ಸಾಗಿ ಉಡಿ ತುಂಬಿಸುಕೊಳ್ಳುವ ಕಾರ್ಯಕ್ರಮ ಸಾಗಿದೆ. ದೇವಿ ಉತ್ಸವದ ನಿಮಿತ್ತ 12 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
12 ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆಯ ಈ ಉತ್ಸವ ಕಾರಣಾಂತರಗಳಿಂದ 1978ರಿಂದ ನಿಂತು ಹೋಗಿತ್ತು. ಆದರೆ, ಈ ಬಾರಿ ಪುರಪ್ರಮುಖರು ಸಭೆ ಸೇರಿ ಉತ್ಸವ ನಡೆಸುವ ತೀರ್ಮಾನ ಕೈಗೊಂಡರು. ಲಕ್ಷ್ಮೀದೇವಿ ಉತ್ಸವದ ಪ್ರಯುಕ್ತ ರಥೋತ್ಸವ, ಹರಿ ಜಾಗರಣೆ, ಭಜನೆ, ಬಂಡಿಗಳ ಮೆರವಣಿಗೆ, ನಾಟಕ, ಜಂಗಿ ಕುಸ್ತಿ ಕಾರ್ಯಕ್ರಮಗಳೂ ನಡೆಯುತ್ತಿವೆ.
ರಂಗ ಕಲೆ ಇನ್ನೂ ಜೀವಂತವಾಗಿರುವ ಉತ್ತರ ಕರ್ನಾಟಕದ ಈ ಭಾಗದಲ್ಲಿ ಉತ್ಸವದ 12 ದಿನವೂ ಒಂದೊಂದು ನಾಟಕ ಪ್ರದರ್ಶನ ನಡೆಯುತ್ತಿದೆ. ಫೆಬ್ರವರಿ 7ರಂದು ಆರಂಭಗೊಂಡ ಉತ್ಸವ 18ರ ಭಾನುವಾರ ಸೀಮೆ ಕಡೆಗೆ ಗ್ರಾಮದೇವತೆ ಲಕ್ಷ್ಮೀದೇವಿಯವರ ಮೆರವಣಿಗೆಯಾಂದಿಗೆ ಅಂತ್ಯಗೊಳ್ಳುತ್ತದೆ.
ಏಳನೇ ತಾರೀಖಿನಿಂದ ಇಲ್ಲಿ ಗರಿಬಾಂಚಾ ಕೈವಾರಿ, ಸಂಗ್ಯಾ ಬಾಳ್ಯಾ, ದರ್ಡಾಸಿಂಗ ದರೋಡಾ, ತನ ಮಾಚೋರಿ, ಡಾಕು ಸಂಗ್ರಾಮ ಮುಂತಾದ ನಾಟಕ ಪ್ರದರ್ಶನಗಳು ನಡೆದವು. ಮಹಾತ್ಮಾಗಾಂಧಿ ಹೈಸ್ಕೂಲ್ ಬಳಿಯ ಮೈದಾನದಲ್ಲಿ ಜಂಗಿ ಕುಸ್ತಿಯೂ ನಡೆಯಿತು. ವಿಜೇತರಿಗೆ ಸಾವಿರಾರು ರುಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು.
ಬಂಡಿ ಮೆರವಣಿಗೆ : ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆಯನ್ನೂ ಏರ್ಪಡಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಲಂಕೃತವಾಗಿ ಸಂಚರಿಸುವ ಈ ಬಂಡಿಗಳಲ್ಲಿ , ಮನ ಸೆಳೆಯುವಂತೆ ಸಿಂಗರಿಸಿಕೊಂಡ ಬಂಡಿಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಗ್ರಾಮದೇವತಾ ಶ್ರೀ ಲಕ್ಷ್ಮೀ ಉತ್ಸವ ಕಮಿಟಿಯ ಪಿ.ಕೆ. ಪಾಟೀಲ್ ತಿಳಿಸಿದ್ದಾರೆ.
(ಬೆಳಗಾವಿ ಪ್ರತಿನಿಧಿಯಿಂದ)