ಜನ ವಿರೋಧಿ ಸರ್ಕಾರದ ವಿರುದ್ಧ ಮಾ. 1 ರಂದು ಬಿಜೆಪಿ ಪ್ರತಿಭಟನೆ
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರಕಾರದ ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಯನ್ನು ವಿರೋಧಿಸಿ, ಮಾರ್ಚ್ 1 ರಂದು ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಲು ಭಾರತೀಯ ಜನತಾ ಪಕ್ಷ ಉದ್ದೇಶಿಸಿದೆ.
ಪಕ್ಷದ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು. ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅವರ ಅಧ್ಯಕ್ಷತೆಯಲ್ಲಿ ಫೆ. 19 ರಂದು ನಡೆಯುವ ಪಕ್ಷದ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆಯನ್ನು ನಿರ್ಧರಿಸಲಾಗುವುದು ಎಂದರು.
ದಿನ ರಾತ್ರಿ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆಯೇ ಮಾತನಾಡುವ ಮುಖ್ಯಮಂತ್ರಿ ಕೃಷ್ಣ ಅವರಿಗೆ ಗ್ರಾಮೀಣ ಪ್ರದೇಶದ ಜನತೆಯ ಅಗತ್ಯಗಳು ಅರ್ಥವಾಗಿಲ್ಲ . ಗ್ರಾಮೀಣ ಪ್ರದೇಶದಲ್ಲಿ ಪ್ರಗತಿಯ ಕಾಮಗಾರಿಗಳು ಕುಂಠಿತಗೊಂಡಿವೆ. ಯಾವುದೇ ಅನುದಾನ ನೀಡದೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಯಡಿಯೂರಪ್ಪ , ಗ್ರಾನೈಟ್ ಹಾಗೂ ಲಿಕ್ಕರ್ ಲಾಬಿಗಳ ಒತ್ತಡಕ್ಕೆ ಮುಖ್ಯಮಂತ್ರಿ ತುತ್ತಾಗಿದ್ದಾರೆ ಎಂದು ಆಪಾದಿಸಿದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ, ಬರುವ ವರ್ಷದ ಆಯವ್ಯಯ ಜನಸಾಮಾನ್ಯರಿಗೆ ಮಾರಕವಾಗುವ ನಿರೀಕ್ಷೆಯಿದೆ. ಆದರೆ, ಜನ ಸಾಮಾನ್ಯರಿಗೆ ಸರ್ಕಾರದಿಂದ ತೊಂದರೆಯಾಗುವುದಕ್ಕೆ ವಿರೋಧ ಪಕ್ಷಗಳು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಅಬಕಾರಿ ಗುತ್ತಿಗೆದಾರರಿಂದ ಬರಬೇಕಾದ ಬಾಕಿ ಹಾಗೂ ಅಬಕಾರಿ ಸುಂಕದಲ್ಲಿನ ಸೋರಿಕೆ ಸುಮಾರು 1450 ಕೋಟಿ ರುಪಾಯಿಗಳಷ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದಲ್ಲಿನ ತೆರಿಗೆ ಸುಧಾರಣಾ ಆಯೋಗ ಹೇಳಿದೆ. ಇಂಥಾ ಸೋರಿಕೆಗಳನ್ನು ಸರ್ಕಾರ ತಡೆಗಟ್ಟಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.
(ಯುಎನ್ಐ)