ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದಲ್ಲೊಬ್ಬ ಮರಿ ಬಾಳ್‌ಠಾಕ್ರೆ

By Staff
|
Google Oneindia Kannada News

*ಯು.ಎನ್‌. ಶೆಟ್ಟಿ , ಕೊಲಂಬಸ್‌, ಯುಎಸ್‌ಎ

ಜನವರಿ 30 ರಂದು ಕರ್ನಾಟಕ ಸರ್ಕಾರದ ಸಚಿವರೊಬ್ಬರು ವಿಶ್ವಶಾಂತಿಯ ಬಗ್ಗೆ ಮಾಡಿದ ಭಾಷಣದಲ್ಲಿ ಗುಜರಾತ್‌ ಭೂಕಂಪದ ಬಗ್ಗೆ ಆಡಿದ ಮಾತಿನ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ವಿಶ್ವಾದ್ಯಂತ ಇರುವ ಕನ್ನಡಿಗರೆಲ್ಲರು ಓದಿರುತ್ತಾರೆ. ಲಕ್ಷಾಂತರ ಜನ ಆಸ್ತಿ ಪಾಸ್ತಿ ಕಳೆದುಕೊಂಡಿರುವಾಗ, ಸಾವಿರಾರು ಜನ ಪ್ರಾಣ ಕಳೆದುಕೊಂಡಿರುವಾಗ ಈ ರೀತಿಯಲ್ಲಿ ಯೋಚಿಸಬಲ್ಲ ಮನಸ್ಸನ್ನೂ , ಅದನ್ನು ನಿರ್ಭಿಡೆಯಿಂದ ಘೋಷಿಸಬಲ್ಲ ಭಂಡ ಧೈರ್ಯವನ್ನೂ ಹೊಂದಿರುವ ಟಿ. ಜಾನ್‌, ಕ್ರಿಶ್ಚಿಯನ್‌ ಮೂಲಭೂತವಾದಿಗಳಿಗಿದ್ದ ಬಹುಕಾಲದ ಕೊರತೆಯನ್ನು ತುಂಬುತ್ತಿದ್ದಾರೆ. ಮೂಲಭೂತವಾದಿಗಳಲ್ಲಿ ಹಿಂದುಗಳಿಗೆ ಬಾಳ್‌ಠಾಕ್ರೆ, ಮುಸ್ಲಿಮರಿಗೆ ಬುಖಾರಿ ಇದ್ದಂತೆ, ಕ್ರಿಶ್ಚಿಯನ್ನರಿಗೆ ತಾವಾಗಬೇಕು ಎಂಬ ದುರಾಲೋಚನೆ ಅವರದಿರಬಹುದು. ಅದೇನೇ ಇರಲಿ, ನಮ್ಮ ರಾಜಕೀಯ ಪಕ್ಷಗಳು ಇನ್ನೂ ಪಾಠ ಕಲಿತಿಲ್ಲವೆನ್ನುವುದು, ಈ ಘಟನೆಗೆ ಅವು ಸ್ಪಂದಿಸಿದ ಶೈಲಿಯಲ್ಲಿ ವ್ಯಕ್ತವಾಗುತ್ತದೆ. ಘಟನೆ ನಡೆದ ನಂತರದ ದಿನಗಳಲ್ಲಿ ಈ ಬಗ್ಗೆ ಪತ್ರಿಕೆಗಳಲ್ಲಿ ಬಂದ ಪ್ರತಿಕ್ರಿಯೆಯನ್ನು ಕಂಡಾಗ, ಭಾರತದಲ್ಲಿ ಕೋಮುವಾದ ಏಕೆ ಜನಪ್ರಿಯವಾಗುತ್ತಿದೆ ಎಂಬ ಚಿಂತನೆಗೆ ಇನ್ನೊಂದು ಅವಕಾಶ ಒದಗಿದೆಯೆನ್ನಿಸುತ್ತದೆ.

ಬೆಟ್ಟೆತ್ತಿ ತೋರುವವರಿಲ್ಲ

ಹಿಂದೊಂದು ಕಾಲವಿತ್ತು . ರಾಜರೊ, ರಾಜ ಕುಟುಂಬದವರೊ ತಪ್ಪು ಮಾಡಿದರೆ ಯಾರೂ ಉಸಿರೆತ್ತುತ್ತಿರಲಿಲ್ಲ . ಜನ ಬದಲಾದಂತೆ ಕಾಲ ಬದಲಾಯಿತೊ ಅಥವಾ ಕಾಲ ಬದಲಾದಂತೆ ಜನ ಬದಲಾದರೊ, ಒಟ್ಟಿನಲ್ಲಿ ಯಾರ ತಪ್ಪನ್ನು ಯಾರು ಬೇಕಾದರೂ ಎತ್ತಿ ಹೇಳುವ ಪರಿಸ್ಥಿತಿ ಭಾರತದ ರಾಜಕಾರಣದಲ್ಲಿ ಕೆಲವು ದಶಕಗಳ ಹಿಂದಿನವರೆಗೂ ಅಸ್ತಿತ್ವದಲ್ಲಿತ್ತು . ಆದರೆ, ಅಂಥಾ ಪ್ರಾಮಾಣಿಕತೆ ಈಗಿಲ್ಲ . ಸಚಿವ ಜಾನ್‌ ಆಡಿದ ಮಾತುಗಳು ನಿಜವಾದಲ್ಲಿ (ನಿಜವಲ್ಲ ಎಂಬ ಹೇಳಿಕೆಗಳು ಎಲ್ಲಿಯೂ ಕಂಡು ಬಂದಿಲ್ಲ . ಲೇಟೆಸ್ಟ್‌ ಸ್ಟೇಟ್‌ಮೆಂಟ್‌ ಪ್ರಕಾರ ಅವರಿಗೆ ತಾನೇನು ಹೇಳಿದ್ದೇನೆ ನೆನಪಿಲ್ಲವಂತೆ- ಟಿವಿ ಕ್ಯಾಸೆಟ್‌ ತರಿಸಿ ನೋಡಬಹುದಲ್ಲ ) ಅದು ಸರ್ವ ರಾಜಕೀಯ ಪಕ್ಷಗಳಿಗೂ ಖಂಡನಾರ್ಹವಾಗಬೇಕಿತ್ತು . ಕ್ರಿಶ್ಚಿಯನ್‌ ಧರ್ಮೀಯರಿಂದಲೂ ಪ್ರಬಲವಾದ ಪ್ರತಿಭಟನೆ ವ್ಯಕ್ತವಾಗಬೇಕಿತ್ತು . ಆದರೆ, ಹಾಗೇನೂ ಆಗಿಲ್ಲ . ಬಿಜೆಪಿಯವರನ್ನು ಬಿಟ್ಟರೆ ಉಳಿದವರ ಪ್ರತಿಕ್ರಿಯೆ ಏನಿಲ್ಲ ಅಂತಲೇ ಹೇಳಬಹುದು. ಸಂಯುಕ್ತ ಜನತಾದಳದವರು ಪ್ರತಿಭಟನೆಯನ್ನು ಬಾಯಾಳಗೆ ಗುಣುಗುಣಿಸಿದ್ದಾರೆ. ಕುಲಾಸೊ ಎಂಬ ಮಾಜಿ ಪೊಲೀಸ್‌ ಅಧಿಕಾರಿ, ಅಖಿಲ ಭಾರತ ಕ್ರಿಶ್ಚಿಯನ್‌ ಕೌನ್ಸಿಲ್‌ ಹೆಸರಿನಲ್ಲಿ ನೀಡಿರುವ ಹೇಳಿಕೆಯಂತೂ ಗಾಬರಿ ಹುಟ್ಟಿಸುವಂತಹುದೇ ಆಗಿದೆ.

ತಣ್ಣಗಿನ ಪ್ರತಿಕ್ರಿಯೆ

ಸಂಯುಕ್ತ ಜನತಾದಳದಿಂದ ಸಿಂಧ್ಯಾ ಅವರ ಒಂದು ಹೇಳಿಕೆ ಹಾಗೂ ಶ್ರೀಪತಿರಾವ್‌ ಅವರಿಂದ ವಿಧಾನಪರಿಷತ್‌ ಅಧ್ಯಕ್ಷರಿಗೆ, ಜಾನ್‌ ಅವರನ್ನು ಎಂಎಲ್‌ಸಿ ಪದದಿಂದ ತೆಗೆಯಬೇಕು ಎಂಬ ಬೇಡಿಕೆ ಬಿಟ್ಟರೆ ಸಂಯುಕ್ತ ಜನತಾದಳದವರ ಪ್ರತಿಕ್ರಿಯೆ ಇನ್ನೇನಿಲ್ಲ . ಮೇಲ್ನೋಟಕ್ಕೆ ಇದೊಂದು ಪ್ರಬುದ್ಧ ರಾಜಕೀಯ ನಡೆಯೆಂಬಂತೆ ಅನಿಸಬಹುದು. ಆದರೆ, ಎಲ್ಲಾ ಸಂದರ್ಭಗಳಲ್ಲಿ ಇವರಿಷ್ಟು ಪ್ರಬುದ್ಧತೆ ತೋರುವುದಿಲ್ಲ ಎನ್ನುವುದು ಮುಖ್ಯ.

ಕ್ರಿಶ್ಚಿಯನ್‌ ಕೌನ್ಸಿಲ್‌ನ ನೇತಾರ ಕುಲಾಸೊ, ಜಾನ್‌ ಕ್ಷಮಾಪಣೆ ಕೇಳಿದ್ರೆ ಸಾಕಿತ್ತು . ಸಂಪುಟದ ಏಕಮಾತ್ರ ಕ್ರಿಶ್ಚಿಯನ್‌ ಸಚಿವರಾಗಿ ಅವರು ರಾಜೀನಾಮೆ ಕೊಡಬೇಕಾಗಿರಲಿಲ್ಲ ಎಂದು ಅಪ್ಪಣೆ ಕೊಡಿಸಿದ್ದಾರೆ. ಜಾನ್‌ ಅವರ ಹೇಳಿಕೆಯ ತೀವ್ರತೆ ಅವರನ್ನು ಕಾಡಿಲ್ಲ . ಅದೇಕೊ, ಕರ್ನಾಟಕದ ಮಾಜಿ ಪೊಲೀಸ್‌ ಅಧಿಕಾರಿಗಳ ವಿಶ್ರಾಂತ ಜೀವನ (ರಾಜ್‌ ಬಿಡುಗಡೆ ಪ್ರಕರಣ ನೆನಪಿಸಿಕೊಳ್ಳಿ) ಚಟುವಟಿಕೆಗಳು, ಇತ್ತೀಚೆಗೆ ಜನಸಾಮಾನ್ಯರಲ್ಲಿ ಅನುಮಾನಕ್ಕೆಡೆ ಮಾಡಿಕೊಡುತ್ತಿವೆ. ಇನ್ನಾವ ಕ್ರಿಶ್ಚಿಯನ್‌ ಧರ್ಮೀಯರಿಂದ ಪ್ರತಿಕ್ರಿಯೆಗಳಿಲ್ಲ .

ಕರ್ನಾಟಕದ ಕಾಂಗ್ರೆಸ್ಸಿಗರು ತಮ್ಮದೆ ಪಕ್ಷದ ಸರ್ಕಾರ ಅಥವಾ ಸಚಿವರ ಬಗ್ಗೆ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲವೆಂದಲ್ಲ . (ರಾಜ್‌ ಅಪಹರಣದ ಕಾಲದಲ್ಲಿ ಬಂದ್‌ಗೆ ಬಂಗಾರಪ್ಪನವರ ಬೆಂಬಲ, ಇತ್ತೀಚಿನ ಉದಾಹರಣೆ). ಆದರೆ, ಈ ಬಾರಿ ಅಂತ ಯಾವ ಪ್ರತಿಕ್ರಿಯೆಯೂ ಇಲ್ಲ . ಕಾರಣವೇನಿರಬಹುದು ? ಜಾನ್‌ ಅವರು ವಿಧಾನಪರಿಷತ್‌ ಸದಸ್ಯರಾದುದು ಹೇಗೆ ಮತ್ತು ಕ್ಷಿಪ್ರಗತಿಯಲ್ಲಿ ಸಚಿವರಾದುದೆಂತು ಎಂಬ ಹಳೆಯ ಒಗಟುಗಳಿಗೆ ಉತ್ತರ ಹುಡುಕಿದರೆ, ಈ ಹೊಸ ಒಗಟಿಗೂ ಉತ್ತರ ಸಿಗುತ್ತದೆ.

1
ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X