ಬೆಂಗಳೂರಿಂದ - ಮೈಸೂರಿಗೆ ಹೋಗಲು ಒಂದೂವರೆ ಗಂಟೆ ಸಾಕು !
ಬೆಂಗಳೂರು : ಬಸ್ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಕನಿಷ್ಠ ಮೂರುವರೆ ಗಂಟೆ ಬೇಕೇ ಬೇಕು. ಆದರೆ, ಎಲ್ಲ ಅಂದುಕೊಂಡಂತೆ ನಡೆದರೆ, ನೀವು ಇನ್ನು ಕೆಲವೇ ವರ್ಷಗಳಲ್ಲಿ ಕೇವಲ ಒಂದೂವರೆ ಗಂಟೆಯಲ್ಲಿ ಮೈಸೂರು ತಲುಪಬಹುದು.
ಆಶ್ಚರ್ಯವಾಯಿತೆ? ಆದರೂ ಇದು ನಿಜ ಎನ್ನುತ್ತಾರೆ ರಾಜ್ಯದ ಲೋಕೋಪಯೋಗಿ ಸಚಿವ ಧರ್ಮಸಿಂಗ್. ಬೆಂಗಳೂರಿಂದ ಮೈಸೂರಿಗೆ ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುವಂತೆ ಮೈಸೂರು - ಬೆಂಗಳೂರು ನಡುವಣ ಸೂಪರ್ ಹೈವೇ ಯೋಜನೆ ರೂಪಿಸಲಾಗಿದೆ ಆದರೆ, ಈ ಕಾಮಗಾರಿಗೆ ಸ್ಥಳೀಯರಿಂದ ವಿರೋಧಗಳು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಎಂದರು.
ಈ ಯೋಜನೆ ಕಾರ್ಯಗತವಾದರೆ, ಬೆಂಗಳೂರು - ಮೈಸೂರು ನಡುವಣ ಅಂತರವೇ ಕಡಿಮೆ ಆದಂತೆ ಆಗುತ್ತದೆ ಎಂದು ಅವರು ಹೇಳಿದರು.
ಆಂಧ್ರದ ಜತೆ ಒಪ್ಪಂದ : ರಾಜ್ಯದ ಗಡಿ ಭಾಗದಲ್ಲಿರುವ ರಸ್ತೆಗಳನ್ನು ನೆರೆಯ ರಾಜ್ಯಗಳೊಂದಿಗೆ ಜಂಟಿ ಕಾರ್ಯಕ್ರಮ ರೂಪಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದೂ ಧರ್ಮಸಿಂಗ್ ತಿಳಿಸಿದರು. ಕರ್ನಾಟಕ ಹಾಗೂ ಆಂಧ್ರ ಪ್ರದೇಶ ನಡುವೆ ವ್ಯಾಪಾರ - ವಹಿವಾಟು ವೃದ್ಧಿಸಲು ಅತ್ಯಗತ್ಯವಾದ ರಸ್ತೆ ದುರಸ್ತಿ ಹಾಗೂ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ಒಪ್ಪಂದ ಮಾಡಿಕೊಂಡಿವೆ.
ಈ ಸಂಬಂಧ ತಮ್ಮ ನೇತೃತ್ವದಲ್ಲಿ ಹೈದರಾಬಾದ್ಗೆ ತೆರಳಿದ್ದ ರಾಜ್ಯ ನಿಯೋಗ ಅಲ್ಲಿನ ವಿಜಯರಾಮ ರಾವ್ ನೇತೃತ್ವದ ತಂಡದ ಜತೆ ಸಮಾಲೋಚನೆ ನಡೆಸಿದ ಬಳಿಕ ಈ ಒಪ್ಪಂದಕ್ಕೆ ಬರಲಾಯಿತು ಎಂದರು. ಇನ್ನು 15 ದಿನಗಳೊಳಗೆ ಎರಡೂ ಸರಕಾರಗಳ ಅಧಿಕಾರಿಗಳು ಸಮಾಲೋಚನೆ ನಡೆಸಿ ಇದಕ್ಕೆ ಮೂರ್ತ ರೂಪ ನೀಡುತ್ತಾರೆ ಎಂದೂ ಅವರು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ವಿಧಿಸುವ ಉಪಕರದಿಂದ ಸಂಗ್ರಹವಾಗುವ ಹಣದಲ್ಲಿ ಶೇ. 10ರಷ್ಟನ್ನು ಕೇಂದ್ರದಿಂದ ಪಡೆದು ಜಂಟಿಯಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ತಿಳಿಸಿದರು. ಎರಡೂ ರಾಜ್ಯಗಳ ವ್ಯಾಪಾರ ವರ್ಧನೆ ಆಗಬೇಕಾದರೆ ಮುಖ್ಯವಾಗಿ ರಸ್ತೆಗಳು ಉತ್ತಮವಾಗಿರಬೇಕು. ಈ ಸಂಬಂಧ ಹೆಚ್ಚಿನ ಮಾತುಕತೆಗಳು ನಡೆದ ಬಳಿಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದೂ ಅವರು ಹೇಳಿದರು. ವಿಶ್ವಬ್ಯಾಂಕ್ಹೆದ್ದಾರಿಗಳ ಸುಧಾರಣೆಗೆ 1900 ಕೋಟಿ ರುಪಾಯಿ ಸಾಲದ ನೆರವು ನೀಡುತ್ತಿದ್ದು, ಕಾಮಗಾರಿ ಜೂನ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದರು.
(ಇನ್ಫೋ ವರದಿ)