ಮೈಸೂರ ಸುತ್ತಮುತ್ತಲ 4 ಜಾಗೆಗಳಲ್ಲಿ ಭೂಕಂಪನ ಸಂಭವನೀಯ
ಮೈಸೂರು : ಬೆಂಗಳೂರಲ್ಲಿ ಮೊನ್ನೆ ಭೂಮಿ ಕೇವಲ 4 ಸೆಕೆಂಡುಗಳ ಕಾಲ ಸ್ವಲ್ಪ ಓಲಾಡಿದ್ದೇ ಫ್ಲಾಟ್ಗಳ ಬೆಲೆ 400 ಅಡಿಗಳಷ್ಟು ಕುಸಿಯಲು ಕಾರಣವಾಗಿರುವ ಇವತ್ತಿನ ಸಂದರ್ಭದಲ್ಲಿ ಇನ್ನೊಂದು ಕೆಟ್ಟ ಸುದ್ದಿ ಇಲ್ಲಿದೆ; ಕರ್ನಾಟಕ ಭೂಕಂಪನದಿಂದ ಸಂಪೂರ್ಣ ಸುರಕ್ಷಿತ ಎಂಬುದು ಅಕ್ಷರಶಃ ಸುಳ್ಳು ಅನ್ನುವಂಥದ್ದು.
ಮೈಸೂರು ವಿಶ್ವವಿದ್ಯಾಲಯದ ಭೂಗರ್ಭಶಾಸ್ತ್ರ ಇಲಾಖೆಯ ಮುಖ್ಯಸ್ಥ ಪ್ರೊ.ಸಿ. ಶ್ರೀಕಂಠಪ್ಪ ಗುರುವಾರ ಸುದ್ದಿಗಾರರಿಗೆ ಶಾಕ್ ಸುದ್ದಿ ಕೊಟ್ಟಿದ್ದಾರೆ- ‘ಮೈಸೂರಿನ ಸುತ್ತಮುತ್ತಲ 4 ಪ್ರದೇಶಗಳಲ್ಲಿ ಭೂಮಿ ಕಂಪಿಸುವ ಸಾಧ್ಯತೆಯಿದೆ. ಕಂಪಿಸಿದಲ್ಲಿ ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ರವರೆಗೆ ಇರಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಮೈಸೂರಿನ ಸುತ್ತಮುತ್ತಲ ಭೂಮಿಯ 3300 ವರ್ಷಗಳ ಹಿಂದಿನ ಅಸ್ತಿತ್ವ ಗಮನಿಸಿದಲ್ಲಿ, ಅದು ಸಮುದ್ರ ಮಟ್ಟಕ್ಕಿಂತ ತಳಭಾಗದಲ್ಲಿತ್ತು. ಇಂಥ ಚರಿತ್ರೆಯುಳ್ಳ ವಸುಂಧರೆ ಅಲುಗಾಡುವ ಸಾಧ್ಯತೆ ಇಲ್ಲದಿಲ್ಲ. ಆದರೆ ಭೂಮಿಯ ಪದರುಗಳು ಒಂದನ್ನೊಂದು ಬಲವಾಗಿ ಹಿಡಿದಿವೆ. ಸಾಂದ್ರತೆ ಹೆಚ್ಚಾಗಿದ್ದು, ಮಣ್ಣಿನ ಕಣಗಳು ಒತ್ತೊತ್ತಾಗಿವೆ. ಈ ಕಾರಣ ಕಂಪನವಾದರೂ ಗುಜರಾತಿನಷ್ಟು ಹಾನಿ ನಮಗಾಗುವುದಿಲ್ಲ ಎಂಬುದೇ ಸಮಾಧಾನದ ಸಂಗತಿ.
ಕಂಪನದ ಸಾಧ್ಯತೆಗಳಿರುವ ಜಾಗೆಗಳಾವುವೆಂದರೆ- ಮೈಸೂರು, ಚಾಮರಾಜನಗರ, ಕೊಳ್ಳೆಗಾಲ, ಮಂಡ್ಯ ಹಾಗೂ ಮದ್ದೂರು. ಈಲ್ಲಾ ನಗರಗಳನ್ನೂ ಸೇರಿಸಿ, ಮೈಸೂರಿನಲ್ಲಿ ಕಂಪನ ದಾಖಲಾ ಕೇಂದ್ರವನ್ನು ಸ್ಥಾಪಿಸುವುದು ಒಳಿತು. ಮತ್ತೊಂದು ಸಮಾಧಾನಕರ ವಿಷಯವೆಂದರೆ ಕನ್ನಂಬಾಡಿ ಕಟ್ಟೆ ಇರುವ ಭೂಮಿ ಕಂಪನ ಸಾಧ್ಯತಾ ಪ್ರದೇಶದಿಂದ ಹೊರತಾಗಿದೆ.
ಕರ್ನಾಟಕ ಭೂಕಂಪನದ ಸಾಧ್ಯತೆಯಿಂದ ಸಂಪೂರ್ಣ ಮುಕ್ತವಾಗಿದೆ ಎಂಬುದು ಶುದ್ಧ ಭ್ರಮೆ ಎಂಬುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ’.
(ಯುಎನ್ಐ)